ಕೋಲಾರ: ನನಗೆ ಇಂಧನ ಖಾತೆಯ ಮೇಲೆ ಆಸೆ ಇದೆ. ಜೊತೆಗೆ ಆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ಇಂಧನ ಖಾತೆ ಸಿಕ್ಕರೆ ಸಂತೋಷ ಎಂದು ಸಚಿವ ನಾಗೇಶ್ ಮತ್ತೊಮ್ಮೆ ಇಂಧನ ಖಾತೆ ಮೇಲೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹಿಂದಿನಿಂದಲೂ ಇಂಧನ ಖಾತೆ ಮೇಲೆ ಒಲವಿತ್ತು. ಅಲ್ಲದೆ, ಆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಇಂಧನ ಖಾತೆ ನೀಡಿದರೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೇನೆ. ಈ ಕುರಿತು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ ನನಗೆ ಅದೇ ಖಾತೆ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಸ್ಥಾನ ಖಚಿತ:
ಅನರ್ಹ ಶಾಸಕರೆಲ್ಲರಿಗೂ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಖಚಿತ. ಅದಕ್ಕಾಗಿ0iÉುೀ ಅರ್ಧದಷ್ಟು ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ನಾನು, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಬಿಜೆಪಿ ಸೇರ್ಪಡೆಯಾಗಲಿದ್ದೇವೆ ಎಂದು ಇದೇ ವೇಳೆ ಬಾಂಬ್ ಸಿಡಿಸಿದ್ದಾರೆ.
ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿರುವ ಎಲ್ಲರೂ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮೂಲಕ ಜಿಲ್ಲೆಯ ಮತ್ತೆ ಆಪರೇಷನ್ ಕಮಲ ನಡೆಯುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿದ ಅವರು, 14 ತಿಂಗಳು ಮೇಲ್ನೋಟಕ್ಕೆ ಚೆನ್ನಾಗಿದ್ದರು. ನಂತರ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಮೈತ್ರಿ ಸರ್ಕಾರವಿದ್ದಾಗ ನನಗೂ ನೋವಿತ್ತು. ಆರಂಭದಲ್ಲೇ ಕೊಡಬೇಕಿದ್ದ ಖಾತೆಯನ್ನು ವರ್ಷದ ನಂತರ ಕೊಟ್ಟು, ಖಾತೆ ಕೊಡಲು ಹತ್ತು ದಿನ ಸತಾಯಿಸಿದ್ದರು ಎಂದು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಒಬ್ಬರು ಇಬ್ಬರು ಭಿನ್ನಮತೀಯರಿಂದ ಏನೂ ಮಾಡಲಾಗುವುದಿಲ್ಲ. ಬಿಜೆಪಿ ಜೊತೆ ನಾವಿದ್ದೇವೆ ಎಂದು ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಕುರಿತು ಪ್ರತಿಕ್ರಿಯಿಸಿದರು. ಇದೆ ವೇಳೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು. ದೇಶದ ಒಳ್ಳೆಯ ನಾಯಕರು ಪ್ರಧಾನಿ ಮೋದಿಯವರಿಗೆ ಆಪ್ತರಾಗಿದ್ದ ಜೇಟ್ಲಿ ನಿಧನ ಬೇಸರ ತಂದಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾಗೇಶ್ ಪ್ರಾರ್ಥಿಸಿದರು.