ಬೆಂಗಳೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಉದ್ಯಮಿ (Businessman) ಪ್ರದೀಪ್ ನಮ್ಮ ಪಕ್ಷದ ಕಾರ್ಯಕರ್ತನೇ ಎಂದು ಶಾಸಕ ಅರವಿಂದ್ ಲಿಂಬಾವಳಿ (Arvind Limbavali) ಸ್ಪಷ್ಟನೆ ನೀಡಿದ್ದಾರೆ.
ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಎಫ್ಐಆರ್ (FIR) ದಾಖಲಾಗಿರುವ ಕುರಿತು ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆಯಿಂದಲೂ ಕುತೂಹಲದಿಂದ ಬಹಳ ಜನ ನನಗೆ ಕರೆ ಮಾಡಿದ್ದರು. ಆ ಘಟನೆ ಬಗ್ಗೆ ಸ್ಪಷ್ಟಿಕರಣ ಕೊಡಲು ಮಾತನಾಡುತ್ತಿದ್ದೇನೆ. ಮೊದಲನೆಯದಾಗಿ ಪ್ರದೀಪನ ಆತ್ಮಕ್ಕೆ ಶಾಂತಿ ಸಿಗಲಿ, ಅವನು ನಮ್ಮ ಕಾರ್ಯಕರ್ತನೆ ಎಂದು ತಿಳಿಸಿದ್ದಾರೆ.
ಪ್ರದೀಪ್ ನಮ್ಮ ಪಕ್ಷದ ಕಾರ್ಯಕರ್ತ, 2019ರ ಚುನಾವಣೆಯಲ್ಲಿ (Election) ಸೋಷಿಯಲ್ ಮೀಡಿಯಾ (Social Media) ಕಾಂಟ್ರ್ಯಾಕ್ಟ್ ತೆಗೆದುಕೊಂಡು ಕೆಲಸ ಮಾಡಿದರು. ಆ ನಂತರ ಕಾರ್ಯಕರ್ತನಾಗಿ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ. ಅಂತಹವನು ಈ ಸ್ಥಿತಿಗೆ ಹೋಗಿರುವುದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಸಿನಿಮಾದಲ್ಲಿ ನಾನಾ ಪಾಟೇಕರ್: ಏನಿದು ಮಿಸ್ ಮ್ಯಾಚ್ ಜೋಡಿ?
ಕಳೆದ ಜೂನ್ ತಿಂಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಮಾತನಾಡಲು ಬಂದಿದ್ದ. ನನ್ನ ಹತ್ತಿರ ಸಮಸ್ಯೆ ಹೇಳಿಕೊಂಡ. ಕೂಡಲೇ ನಾನು ಅವನು ಹೇಳಿದ ನಂಬರ್ಗಳಿಗೆ ಕರೆ ಮಾಡಿದ್ದೆ, ಪ್ರದೀಪ್ ಹೂಡಿಕೆ ಮಾಡಿದ್ದ ಹಣ ವಾಪಸ್ ಕೊಡಿ ಅಂತ ಹೇಳಿದ್ದೆ. ಆದ್ರೆ ಕರೆ ಸ್ವೀಕರಿಸಿದ್ದ ವ್ಯಕ್ತಿ ಕೊರೊನಾ ಸಂಕಷ್ಟ ನಿವಾರಿಸಿಕೊಂಡು ಹಣ ಕೊಡ್ತೀವಿ ಎಂದಿದ್ದರು. 15 ದಿನದ ನಂತರ ಪುನಃ ಬಂದಾಗ ಅವನು ಹೇಳಿದ ಇಬ್ಬರಿಗೂ ಮತ್ತೆ ಕರೆ ಮಾಡಿ ಖಾರವಾಗಿಯೇ ಹೇಳಿದೆ. ಪ್ರದೀಪ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ ಹಣ ಸೆಟ್ಲು ಮಾಡಿ ಅಂತಾ ವಾರ್ನಿಂಗ್ ಸಹ ಮಾಡಿದ್ದೆ. ನಂತರ ಗುದ್ದಲಿ ಪೂಜೆ ಕಾರ್ಯಕ್ರಮವೊಂದರಲ್ಲಿ ಸಿಕ್ಕಿ ಸಮಸ್ಯೆ ಬಗೆಹರಿದಿದೆ ಥ್ಯಾಂಕ್ಸ್ ಅಂತಾ ಹೇಳಿದ್ದ ಎಂದು ವಿವರಿಸಿದ್ದಾರೆ.
ಅದಾದ ನಂತರ ಬೆಳ್ಳಂದೂರು ಠಾಣೆಯಲ್ಲಿ ಅವರ ಪತ್ನಿ ದೂರು ನೀಡಿದ್ದರು. ಅವರ ಕೌಟುಂಬಿಕ ಸಮಸ್ಯೆ ಆದಾಗ ನನ್ನ ಹತ್ತಿರ ಬಂದಿದ್ದರು. ಆಗಲೂ ಪೊಲೀಸರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೆ. ಈಗ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆಯೂ ತನಿಖೆ ನಡೆಯಬೇಕು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಎಫ್ಐಆರ್ನಲ್ಲಿ ಹೆಸರು ದಾಖಲಾಗಿರೋ ಗೋಪಿ, ಸುಬ್ಬಯ್ಯ ಎಲ್ಲರೂ ನನಗೆ ಪರಿಚಯಸ್ಥರೇ. ಅವರು ವೈಟ್ ಪಟೇಲ್ಸ್ನ (White Petals) ಮಾಲಿಕರು. ನಮ್ಮ ಪಕ್ಷದ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿರುತ್ತದೆ. ಆದ್ದರಿಂದ ಸಹಜವಾಗಿಯೇ ಪರಿಚಯ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಪ್ರಕರಣ – ಲಿಂಬಾವಳಿ ಸೇರಿ 6 ಜನರ ವಿರುದ್ಧ FIR
ಏನಿದು ಪ್ರಕರಣ?
ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 6 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಉದ್ಯಮಿ ಪ್ರದೀಪ್ ಡೆತ್ ನೋಟ್ನಲ್ಲಿ ಲಿಂಬಾವಳಿ ಸೇರಿದಂತೆ 6 ಜನರ ಹೆಸರು ಬರೆದಿಟ್ಟು ಬೆಂಗಳೂರಿನ ದಕ್ಷಿಣ ತಾಲೂಕು ನೆಟ್ಟಗೆರೆ ಬಳಿ ತಮ್ಮ ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್ನಲ್ಲಿ ಅರವಿಂದ ಲಿಂಬಾವಳಿ, ಗೋಪಿ, ರಘುವ ಭಟ್, ಸೋಮಯ್ಯ, ರಮೇಶ್ ರೆಡ್ಡಿ ಹಾಗೂ ಜಯರಾಮ್ ಎಂದು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.