ಭೋಪಾಲ್: 6 ವರ್ಷಗಳ ಹಿಂದೆ ನಡೆದಿದ್ದ ಬಸ್ ಅಪಘಾತದಲ್ಲಿ, 22 ಜನರ ಸಾವಿಗೆ ಕಾರಣನಾಗಿದ್ದ ಬಸ್ ಚಾಲಕನಿಗೆ ಮಧ್ಯಪ್ರದೇಶ ಸ್ಥಳೀಯ ವಿಶೇಷ ನ್ಯಾಯಾಲವು 190 ವರ್ಷ ಜೈಲು ಶಿಕ್ಷೆ ನೀಡಿದೆ.
22 ಜನರ ಸಾವಿಗೆ ಕಾರಣವಾದ ಚಾಲಕ ಶಂಸುದ್ದೀನ್ಗೆ 190 ವರ್ಷ ಜೈಲು ಶಿಕ್ಷೆಯನ್ನು ಮಧ್ಯಪ್ರದೇಶ ಸ್ಥಳೀಯ ವಿಶೇಷ ನ್ಯಾಯಾಲಯ ವಿಧಿಸಿದೆ. 19 ಪ್ರತ್ಯೇಕ ಪ್ರಕರಗಳಲ್ಲಿ ತಲಾ 10 ವರ್ಷದಂತೆ ಈ ಸಜೆ ವಿಧಿಸಿ ಆದೇಶಿಸಿದೆ. ಈ ಎಲ್ಲ ಶಿಕ್ಷೆಗಳನ್ನೂ ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ಕೋರ್ಟ್ ಆದೇಶಿಸಿರುವ ಕಾರಣ, ಚಾಲಕ ಶಂಸುದ್ದೀನ್ ತಲಾ 10 ವರ್ಷ 19 ಶಿಕ್ಷೆಗಳನ್ನು 190 ವರ್ಷಗಳ ಕಾಲ ಅನುಭವಿಸಬೇಕಾಗುತ್ತದೆ. ಹೀಗಾಗಿ ಒಂದರ್ಥದಲ್ಲಿ ಇದು ಸಾಯುವವರೆಗೂ ಜೈಲು ಶಿಕ್ಷೆ ಎನ್ನಬಹುದಾಗಿದೆ. ಬಸ್ ಮಾಲೀಕನಿಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪಘಾತ ಪ್ರಕರಣಗಳಲ್ಲಿ ಬಹುಶಃ ಇಂಥ ಶಿಕ್ಷೆ ಇದೇ ಮೊದಲು ಎಂದು ಹೇಳಬಹುದಾಗಿದೆ. ಇದನ್ನೂ ಓದಿ: NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್ಐ!
ಏನಿದು ಪ್ರಕರಣ?: ಮೇ 4, 2015 ರಂದು ಖಾಸಗಿ ಬಸ್ ಚಾಲಕ ಶಂಸುದ್ದೀನ್ (47) ಅತಿ ವೇಗವಾಗಿ ಬಸ್ ಚಾಲನೆ ಮಾಡಿದ ಪರಿಣಾಮ, ನಾಲೆಗೆ ಬಸ್ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಬಸ್ನಲ್ಲಿದ್ದ 65 ಜನರಲ್ಲಿ 22 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಅನೇಕರು ಗಾಯಗೊಂಡಿದ್ದರು. ಈ ಬಸ್ನಲ್ಲಿದ್ದ ತುರ್ತು ನಿರ್ಗಮನ ದ್ವಾರವನ್ನು ಸಹಾ ಕಬ್ಬಿಣದ ರಾಡ್ಗಳಿಂದ ಬಂದ್ ಮಾಡಿ ಹೆಚ್ಚುವರಿ ಸೀಟ್ ಅಳವಡಿಸಲಾಗಿತ್ತು. ಇದರಿಂದಾಗಿ ಜನರಿಗೆ ಬಸ್ಸಿನಿಂದ ಹೊರ ಬರುವುದು ಕಷ್ಟವಾಗಿತ್ತು. ಬಸ್ ಚಾಲಕ ಅತಿ ವೇಗವಾಗಿ ಬಸ್ ಚಾಲನೆ ಮಾಡಿದ್ದೆ ಈ ಅಪಘಾತಕ್ಕೆ ಕಾರಣವಾಗಿದೆ. ಬಸ್ಸಿನಲ್ಲಿ ಕೂಡಾ ಸಾಕಷ್ಟು ಸುರಕ್ಷತಾ ಲೋಪಗಳಿವೆ ಎಂದು ಪೊಲೀಸರು ನಿರ್ಲಕ್ಷ್ಯದ ಚಾಲನೆ ಎಂದು ಪ್ರಕರಣ ದಾಖಲಿಸಿದ್ದರು.