ಚಾಮರಾಜನಗರ: ಮೊನ್ನೆಯಷ್ಟೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದ ಬಿಎಸ್ಪಿ ಶಾಸಕ ಎನ್.ಮಹೇಶ್ ಇದೀಗ ಮತ್ತೆ ಉಲ್ಟಾ ಹೊಡೆದಿದ್ದು, ವಿಶ್ವಾಸ ಮತಯಾಚನೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರಂಭದಲ್ಲಿ ಯಾರಿಗೂ ಬೆಂಬಲ ನೀಡದಿರುವಂತೆ ಮಾಯಾವತಿ ಅವರು ಸೂಚಿಸಿದ್ದು ಹೀಗಾಗಿ ಯಾವ ಪಕ್ಷಕ್ಕೂ ನಾನು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಸದನ ಆರಂಭವಾಗುವುದಕ್ಕೂ ಮುನ್ನಾದಿನ ಪ್ರತಿಕ್ರಿಯೆ ನೀಡಿ, ನಿಮ್ಮ ಇಷ್ಟ ಯಾರಿಗಾದರೂ ಬೆಂಬಲ ನೀಡಿ ಎಂದು ಮಾಯಾವತಿ ಅವರು ತಿಳಿಸಿದ್ದಾರೆ. ಹೀಗಾಗಿ ನಾನು ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದರು.
ಇದೀಗ ಅತೃಪ್ತ ಶಾಸಕರ ಮನವೊಲಿಸುವಲ್ಲಿಯೂ ಮೈತ್ರಿ ನಾಯಕರು ವಿಫಲವಾಗಿದ್ದು, ಇದರ ಬೆನ್ನಲ್ಲೇ ಶಾಸಕ ಎನ್.ಮಹೇಶ್ ಸಹ ಬೆಂಬಲ ನೀಡುವುದಿಲ್ಲ ಎಂದು ಹೇಳಿರುವುದು ಮೈತ್ರಿ ಸರ್ಕಾರಕ್ಕೆ ಆಘಾತವನ್ನುಂಟು ಮಾಡಿದೆ.
ಈ ಕುರಿತು ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿರುವ ಎನ್.ಮಹೇಶ್, ಮಾಯಾವತಿ ಅವರು ತಟಸ್ಥವಾಗಿರಲು ಹೇಳಿದ್ದು, ಹೀಗಾಗಿ ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಎರಡು ದಿನ ನನಗೆ ಖಾಸಗಿ ಕೆಲಸ ಇತ್ತು ಹೀಗಾಗಿ ಸದನಕ್ಕೆ ಹೋಗಿರಲಿಲ್ಲ. ನಾಳೆಯೂ ಸಹ ಕ್ಷೇತ್ರದಲ್ಲಿ ಖಾಸಗಿ ಕೆಲಸವಿದ್ದು, ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.