ಹುಬ್ಬಳ್ಳಿ: ಭಾನುವಾರ ಕಲ್ಲಿನ ಕ್ವಾರಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಬಾಲಕನ ಶವ ಎರಡು ದಿನಗಳ ನಂತರ ಪತ್ತೆಯಾಗಿದೆ.
ಜುಲೈ 2 ರಂದು ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ಈಜಲು ಬಂದಿದ್ದ 14 ವರ್ಷದ ಬಾಲಕ ವಿದ್ಯಾಸಾಗರ ಹನಮಕ್ಕನವರ್ ನೀರಿನಲ್ಲಿ ಮುಳುಗಿದ್ದ.
ಆದ್ರೆ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೂ ಕೂಡ ಎರಡು ದಿನಗಳ ವರೆಗೆ ಮೃತದೇಹ ಪತ್ತೆಯಾಗಿರಲಿಲ್ಲ. ಎರಡು ದಿನಗಳಿಂದಲೂ ಕಾರವಾರ ಸಿಬರ್ಡ್ ನೌಕಾ ನೆಲೆ ಸಿಬ್ಬದಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಚರಣೆ ನಡೆಸುತ್ತಿದ್ದರು. ಮಂಗಳವಾರ ಬೆಳಗಿನ ಜಾವ ಮತ್ತೆ ಶೋಧ ಕಾರ್ಯ ನಡೆಸಿ ಬಾಲಕನ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಹಶೀಲ್ದಾರ ಶಶಿಧರ ಮಾಡ್ಯಾಳ, ಹುಬ್ಬಳ್ಳಿ ಗ್ರಾಮಾಂತರ ಠಾಣಾ ಪೊಲೀಸರು, ಜಿಲ್ಲಾಡಳಿತ ಸಿಬ್ಬಂದಿ, ಗ್ರಾಮಸ್ಥರು ಸ್ಥಳದಲ್ಲಿಯೇ ಬೀಡುಬಿಟ್ಟು ಕಾರ್ಯಾಚರಣೆ ನಡೆಸಿದ್ದರು. ಬಾಲಕನ ಶವವನ್ನು ಹೊರತಗೆಯುತ್ತಿದಂತೆ ಸಂಬಂಧಿಗಳು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.