ಬಾಗಲಕೋಟೆ: ಹಂದಿ ಹಿಡಿಯಲು ಬಳಸುವ ಸಿಡಿಮದ್ದು ಸ್ಫೋಟಗೊಂಡು ಬಾಲಕನೊಬ್ಬನ ಎಡಗೈನ ಎರಡು ಕೈ ಬೆರಳು ಕಟ್ ಆಗಿರುವ ಘಟನೆ ಬಾಗಲಕೋಟೆ ತಾಲೂಕಿನ ದೇವನಾಳ ಗ್ರಾಮದಲ್ಲಿ ನಡೆದಿದೆ.
9ನೇ ತರಗತಿ ವಿದ್ಯಾರ್ಥಿಯಾಗಿರುವ ಮೋಹನದಾಸ್ ಸಾಬಣ್ಣ ಹಳಮನಿಯ ಎರಡು ಕೈ ಬೆರಳು ತುಂಡಾಗಿದೆ. ಮೂಲತಃ ಬೀಳಗಿ ತಾಲೂಕಿನ ಸೊಕನಾದಗಿ ಗ್ರಾಮದವನಾದ ಮೋಹನ್ ದಾಸ್, ಕುರಿ ಮೇಯಿಸಲು ದೇವನಾಳ ಗ್ರಾಮದ ಕಡೆಗೆ ತೆರಳಿದ್ದನು. ಈ ವೇಳೆ ಹಂದಿ ಉಪಟಳ ತಗ್ಗಿಸಲು ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಹೊಲದಲ್ಲಿ ಸಿಡಿಮದ್ದನ್ನ ತಂದು ಇಟ್ಟಿದ್ದರು.
ಕುರಿ ಮೇಯಿಸಲು ಹೋದ ಬಾಲಕ ಸಿಡಿಮದ್ದನ್ನು ಹಿಡಿದಾಗ ಸ್ಫೋಟಗೊಂಡು ಎಡಗೈನ ಎರಡು ಬೆರಳು ಕಟ್ ಆಗಿವೆ. ವಿಷಯ ತಿಳಿದ ಗ್ರಾಮಸ್ಥರು, ಗಾಯಗೊಂಡ ಬಾಲಕನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ಚಿಕಿತ್ಸೆಗೆ ಸ್ಪಂದಿಸಿರುವ ಬಾಲಕ ಮೋಹನ ದಾಸ್ ಚೇತರಿಸಿಕೊಳ್ಳುತ್ತಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv