‘ಬಾರೋ ಅಂದ್ರೆ ಬರದೆ ಇರ್ತೀವಾ ನಾವು?’ ‘ಇದು ನಿಮ್ಮ ಆಟ… ನಿಮ್ಮನ್…’ ‘ಏನೋ ನಿಮ್ಮನ್… ಹೇಳೋ… ಮುಂದಕ್ಕೆ ಹೇಳೋ…’ ‘ಅಗ್ರೆಸಿವ್ ಆಗಿ ಆಡ್ಬೇಕಾ? ಡರ್ಟಿ ಗೇಮ್ ನಾನ್ ತೋರಿಸ್ತೀನಿ’ ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಮಾತುಗಳ ಚಕಮಕಿ ತಾರಕಕ್ಕೇರಿದೆ. ಮಾತಿನ ಜೊತೆಗೆ ಕೈ ಕೈ ಮಿಲಾಯಿಸುವ, ಎದುರಾಬದಿರು ನಿಂತು ಕೆಣಕುವ ಪ್ರಸಂಗಗಳೂ ನಡೆದಿವೆ.
ವಿನಯ್ (Vinay) ಮತ್ತು ಕಾರ್ತಿಕ್ (Karthik) ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ. JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಬೆಂಕಿಯ ಕಿಡಿಗಳು ಸಿಡಿಯುತ್ತಿರುವುದು ಜಾಹೀರಾಗಿದೆ. ಬಿಗ್ಬಾಸ್ ಮನೆಯ ಸದಸ್ಯರಿಗೆ ‘ಮಣ್ಣಿನಲ್ಲಿ ಬಣ್ಣದ ಹೂಗಳನ್ನು ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು’ ಎಂಬ ಟಾಸ್ಕ್ ನೀಡಲಾಗಿದೆ. ಹೂವಿನಿಂದ ಶುರುವಾದ ಈ ಆಟ ಸ್ವಲ್ಪವೇ ಹೊತ್ತಿನಲ್ಲಿ ಜಿದ್ದಾಜಿದ್ದಿಯ ಬೆಂಕಿಯಾಗಿ ಬೆಳೆದಿದೆ.
ಒಂದು ತಂಡದ ಹೂವನ್ನು ಇನ್ನೊಂದು ತಂಡ ಕಿತ್ತುಕೊಳ್ಳಲು ಹಾಳುಗೆಡವಲು ಯತ್ನಿಸಿದ್ದು ಮಾತಿನ ಚಕಮಕಿಗೆ ಕಾರಣವಾಗಿದೆ. ಒಬ್ಬರು ಇನ್ನೊಬ್ಬರನ್ನು ಎಳದಾಡಿ, ಜಗಳವಾಡಿಕೊಳ್ಳುವವರೆಗೂ ಮುಟ್ಟಿದೆ. ತುಕಾಲಿ ಸಂತೋಷ್, ಪ್ರತಾಪ್ ಅವರನ್ನು ನೆಲಕ್ಕುರುಳಿಸಿ ಹೂ ಹಾಳು ಮಾಡಿದ್ದಾರೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ. ಮೈಕಲ್ ಹೂಬುಟ್ಟಿ ಗಟ್ಟಿಯಾಗಿ ಹಿಡಿದುಕೊಂಡರೆ ಉಳಿದವರೆಲ್ಲ ಅವರ ಮೇಲೆ ಬಿದ್ದಿದ್ದಾರೆ.
ಕಳೆದ ಒಂದೆರಡು ವಾರಗಳಲ್ಲಿ ಸೈಲೆಂಟ್ ಆಗಿದ್ದ ವಿನಯ್ ಈ ವಾರ ಸಖತ್ ಅಗ್ರೆಸಿವ್ ಆಗಿದ್ದಾರೆ. ಅದರ ಪರಿಣಾಮ ಈ ಗೇಮ್ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತಿದೆ.