ಹಾವೇರಿ: ರೈತರು ಬೆಳೆದ ಬೆಳೆ ಕೃಷ್ಣ ಮೃಗಗಳ ದಾಳಿಗೆ ಹಾಳಾಗಿ ಜಿಲ್ಲೆಯ ಹಲವಾರು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಿನದಿಂದ ದಿನಕ್ಕೆ ಜಿಲ್ಲೆಯ ದೇವಗಿರಿ ಯಲ್ಲಾಪುರ, ನಾಗನೂರು, ಮೊಟೇಬೆನ್ನೂರು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕೃಷ್ಣಮೃಗಗಳ ಕಾಟ ಹೆಚ್ಚಾಗುತ್ತಿದೆ. ರೈತರು ಬೆಳೆದ ಬೆಳೆಯನ್ನು ತಿಂದು ಹಾಳುಮಾಡುತ್ತಿವೆ. ಇದರಿಂದ ಅನ್ನದಾತ ಮತ್ತೆ ಸಂಕಷ್ಟಕ್ಕೆ ಈಡಾಗಿದ್ದಾನೆ.
13 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳಾದ ಹತ್ತಿ, ಶೇಂಗಾ, ಸೋಯಾಬಿನ್, ಮಕ್ಕೆಜೋಳದ ಬೆಳೆಗಳನ್ನು ಸಂಪೂರ್ಣವಾಗಿ ತಿಂದು ಹಾಕಿವೆ. ಈ ವಿಚಾರವನ್ನು ಹಲವಾರು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ ಯಾವ ಅಧಿಕಾರಿಗಳೂ ಸಹ ಜಮೀನುಗಳಿಗೆ ಭೇಟಿ ನೀಡಿಲ್ಲ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗುತ್ತಿದೆ. ರೈತರು ಕೂಡ ಬೆಳೆ ಚೆನ್ನಾಗಿ ಬರುವ ನಿರೀಕ್ಷೆಯನ್ನು ಹೊದಿದ್ದಾರೆ. ಆದರೆ ರೈತರ ಜಮೀನುಗಳಲ್ಲಿ ದಿನದಿಂದ ದಿನಕ್ಕೆ ಕೃಷ್ಣಮೃಗಗಳ ಕಾಟ ಹೆಚ್ಚಾಗುತ್ತಿದೆ. ಹಾವೇರಿ ಸಮೀಪದ ದೇವಗಿರಿ ಯಲ್ಲಾಪುರ, ನಾಗನೂರು, ಮೊಟೇಬೆನ್ನೂರು ಸೇರಿದಂತೆ ವಿವಿಧ ಗ್ರಾಮದ ರೈತರ ಬೆಳೆಗಳನ್ನು ಜಿಂಕೆಗಳು ದಿನನಿತ್ಯ ತಿಂದು ಹಾಳುಮಾಡುತ್ತಿವೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಿ ಬೆಳೆಯನ್ನು ಈಗಾಗಲೇ ಎರಡು ಬಾರಿ ಬಿತ್ತನೆ ಮಾಡಿದ್ದೇವೆ. ಈಗ ಮತ್ತೊಮ್ಮೆ ಬಿತ್ತನೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.