ಧಾರವಾಡ: ಕಲಬುರಗಿ ಫಲಿತಾಂಶದಷ್ಟೇ ಕುತೂಹಲ ಕೆರಳಿಸಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ. ಇಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿಎಂ ಕ್ಯಾಂಡಿಡೇಟ್ ಅಂತಲೇ ಬಿಂಬಿತವಾಗಿದ್ದ ಅರವಿಂದ್ ಬೆಲ್ಲದ್ ರಂತಹ ಘಟಾನುಘಟಿಗಳು ಇದ್ದರೂ, ಇಲ್ಲಿ ಅಧಿಕಾರ ಉರುಳಿಸಿಕೊಳ್ಳಲು ಏದುಸಿರು ಬಿಡ್ತಿದೆ.
ಕಾಂಗ್ರೆಸ್ ನಿರೀಕ್ಷೆ ಮೀರಿ ಉತ್ತಮ ಸಾಧನೆ ಮಾಡಿದ್ರಿಂದ ಇಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಬಿಜೆಪಿ ಕಷ್ಟಪಟ್ಟು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಶಾಸಕರು, ಸಂಸದರ ನೆರವಿನಿಂದ ಗದ್ದುಗೆ ಏರುವುದು ನಿಶ್ಚಿತವಾಗಿದೆ. ಇಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಿದ್ದು ಬಿಜೆಪಿಯಲ್ಲ. ಎಂಐಎಂ ಅಂದ್ರೆ ತಪ್ಪಾಗಲಿಕ್ಕಿಲ್ಲ. ಕಾಂಗ್ರೆಸ್ನ ಪಾರಂಪರಿಕ ಮತಗಳಿಗೆ ಅಸಾದುದ್ದೀನ್ ಓವೈಸಿ ಪಕ್ಷ ಕನ್ನಹಾಕದೇ ಇದ್ದಿದ್ರೆ ಬಿಜೆಪಿಗೆ ಅಧಿಕಾರ ಗಗನ ಕುಸುಮವಾಗುತ್ತಿತ್ತು. ಇದನ್ನೂ ಓದಿ: ನಾಡದ್ರೋಹಿ ಎಂಇಎಸ್ಗೆ ಸೋಲು – ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಯಾರಿಗೆ ಎಷ್ಟು ಸ್ಥಾನ?
ಒಟ್ಟು 92 ಸ್ಥಾನಗಳಿದ್ದು, ಬಹುಮತಕ್ಕೆ 47 ಮತಗಳು ಬೇಕಿದೆ. ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1, ಎಂಐಎಂ 3, 6 ಮಂದಿ ಪಕ್ಷೇತರ(ಮೂವರು ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಗೆಲುವು) ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.
ಬಿಜೆಪಿಗೆ 1 ಸಂಸದ, 3 ಶಾಸಕರು, 2 ಎಂಎಲ್ಸಿ ಮತ್ತು ಮೂವರು ಪಕ್ಷೇತರರ ಬಲ ಇರುವ ಕಾರಣ 48 ಮತಗಳನ್ನು ಪಡೆದು ಅಧಿಕಾರಕ್ಕೆ ಏರಲಿದೆ. ಕಾಂಗ್ರೆಸ್ಸಿಗೆ ಓರ್ವ ಶಾಸಕನ ಬೆಂಬಲ ಇರುವ ಕಾರಣ ಒಟ್ಟು 34 ಮತಗಳು ಮಾತ್ರ ಸಿಗಲಿದೆ. ಇದನ್ನೂ ಓದಿ: ಅತಂತ್ರವಾದರೂ ಬಿಜೆಪಿಗೆ ಅಧಿಕಾರ – ಕಲಬುರಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು?
ಬಿಜೆಪಿ ಇಲ್ಲಿ 60 ಸ್ಥಾನಗಳನ್ನು ಗೆಲ್ಲುವ ಪ್ಲ್ಯಾನ್ ಹಾಕಿಕೊಂಡಿತ್ತು. ಆದರೆ ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳಿಂದ ಮತ ವಿಭಜನೆಯಾಗಿ ಹೊಡೆತ ಬಿದ್ದಿದೆ. ಇದರ ಜೊತೆ ಸ್ವಲ್ಪ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆಯೂ ಕಾರಣವಾಗಿದೆ.
ಕಾಂಗ್ರೆಸ್ಗೆ ಬಂಡಾಯ ಅಭ್ಯರ್ಥಿಗಳು ಕಂಟಕವಾಗಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಾರಂಪರಿಕ ಮತಗಳಿಗೆ ಎಂಐಎಂ ಕನ್ನ ಹಾಕಿದ್ದರಿಂದ ಹಿನ್ನಡೆಯಾಗಿದೆ.