– ಕಾಂಗ್ರೆಸ್ನ ಮುಖವಾಣಿಯಂತೆ ದೊರೆಸ್ವಾಮಿ ವರ್ತಿನೆ
ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ಧ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕರು, ವೀರ ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡಿರುವ ಕಾಂಗ್ರೆಸ್ ಮೊದಲು ಕ್ಷಮೆ ಕೋರಲಿ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಷ್ಟು ದೊರೆಸ್ವಾಮಿಯವರು ದೊಡ್ಡ ಹೋರಾಟಗಾರರಾ? ಕಾಂಗ್ರೆಸ್ನ ಮುಖವಾಣಿಯಂತೆ ದೊರೆಸ್ವಾಮಿಯವರು ವರ್ತಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರು ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಾರೆ. ಮಹಾತ್ಮ ಗಾಂಧಿ ಅವರು ಕೂಡ ಪಾಕಿಸ್ತಾನದ ಹಿಂದೂಗಳ ಮೇಲೆ ದೌರ್ಜನ್ಯವಾದ ಸಂದರ್ಭದಲ್ಲಿ ಭಾರತದಲ್ಲಿ ಇರುವವರಿಗೆ ಪೌರತ್ವ ಕೊಡುವುದರ ಬಗ್ಗೆ ಮಾತನಾಡಿದ್ದರು. ಮಹಾತ್ಮ ಗಾಂಧಿಯವರಿಂದ ಹಿಡಿದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರವರೆಗೂ ಪೌರತ್ವದ ಬಗ್ಗೆ ಮಾತನಾಡಿದ್ದಾರೆ. ಮೊದಲು ಕಾಂಗ್ರೆಸ್ನವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸ್ನವರು ಬಹಳಷ್ಟು ಕೀಳಾಗಿ ಮಾತನಾಡಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಮೊದಲು ಕ್ಷಮಾಪಣೆ ಕೇಳಲಿ. ಆ ನಂತರ ನಾನು ಪ್ರತಿಕ್ರಿಯಿಸುತ್ತೇನೆ. ವೀರ ಸಾವರ್ಕರ್ ಅವರು ದೇಶ ಕಂಡ ಅಪರೂಪದ ಸ್ವಾತಂತ್ರ್ಯ ಹೋರಾಟಗಾರರು. ನಾನು ಯಾರ ಬಳಿಯೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ದೇಶದಲ್ಲಿ ಅಶಾಂತಿ ಇದೆ ಎಂದು ತೋರಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂದಾಗ ಪ್ರತಿಭಟನೆ ಮಾಡಿಸುತ್ತಾರೆ. ಇದರಲ್ಲಿ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿದೆ. ತನ್ನ ದೇಶದ ಜನರಿಗೆ ತಿನ್ನಲು ಆಹಾರ ನೀಡಲು ಆಗದೇ ಇರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತ ದೇಶದ ಬಗ್ಗೆ ಮಾತನಾಡುತ್ತಾರೆ. ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಇಮ್ರಾನ್ ಖಾನ್ ಯಾರು? ನಮ್ಮ ದೇಶದಲ್ಲಿರುವ ಕಾಂಗ್ರೆಸ್ಸಿಗರೆಲ್ಲರೂ ಪಾಕಿಸ್ತಾನದ ಏಜೆಂಟರ್ ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.