ಬೆಳಗಾವಿ: ಕುಂದಾನಗರಿ ಬಿಜೆಪಿಯಲ್ಲಿ ಬಣ ರಾಜಕೀಯ ಶಮನ ಸೇರಿದಂತೆ ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುವ ಸಲುವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎರಡು ದಿನಗಳ ಕಾಲ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಎರಡು ದಿನ ಪ್ರವಾಸ ಕೈಗೊಂಡಿದ್ದು ಯಡಿಯೂರಪ್ಪ ಹಾಗೂ ಅರುಣ್ ಸಿಂಗ್, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಅವರು ನಾಳೆ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಎರಡು ದಿನ ಸಂಘಟನಾತ್ಮಕ ಕಾರ್ಯಕ್ರಮಗಳ ಆಯೋಜನೆ ಮಾಡಲಿದ್ದು, ಜಿಲ್ಲೆ, ಬೆಳಗಾವಿ ಗ್ರಾಮೀಣ, ಚಿಕ್ಕೋಡಿ ನಗರದನಾಯಕರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಹಗರಣ – ED ಅಧಿಕಾರಿಗಳಿಂದ ಮಲ್ಲಿಕಾರ್ಜುನ್ ಖರ್ಗೆ ವಿಚಾರಣೆ
ಈ ವೇಳೆ ಜಿಲ್ಲೆಯ ಬಣ ರಾಜಕೀಯದ ಬಗ್ಗೆ ಎರಡು ದಿನ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯ್ತಿ ಚುನಾವಣೆ ಹಾಗೂ 2023ರ ವಿಧಾನಸಭೆಯ ಸಾರ್ವಜನಿಕ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಜಿಲ್ಲೆಯ ಹೆಚ್ಚು ಸ್ಥಾನ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಎರಡು ದಿನಗಳ ಕಾಲ ಪಕ್ಷ ಸಂಘಟನೆ, ಸೇರಿದಂತೆ ಭಿನ್ನಮತ ಬಗೆಹರಿಸಲು ನಾಯಕರು ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು: ಬಿಎಸ್ವೈ
ಬಣ ರಾಜಕೀಯ ಶಮನಕ್ಕೂ ಯತ್ನ: ಬೆಳಗಾವಿ ಪರಿಷತ್ ಚುನಾವಣೆ ಸೋಲಿನ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಬಣ ರಾಜಕೀಯ ಹೆಚ್ಚಾಗಿದೆ. ಸದ್ಯ ಜಿಲ್ಲೆಯಲ್ಲಿ ಕತ್ತಿ, ಜಾರಕಿಹೊಳಿ ಬಣಗಳ ನಡುವೆ ತಿಕ್ಕಾಟ ಇದೆ. ಇದನ್ನು ಪರಿಹರಿಸಲು ಪ್ರಯತ್ನ ನಡೆದಿದೆ. ಕಳೆದ ಹಲವು ದಿನಗಳ ಹಿಂದೆ ಜಾರಕಿಹೊಳಿ ಸಹೋದರನ್ನು ಹೊರಗಿಟ್ಟು ಸಚಿವ ಉಮೇಶ್ ಕತ್ತಿ ನೇತೃತ್ವದ ಬಣದ ಲಕ್ಷಣ್ ಸವದಿ, ಶಶಿಕಲಾ ಜೊಲ್ಲೆ, ಮಹಾಂತೇಶ್ ಕವಟಗಿಮಠ ಒಂದಾಗಿ ಮಹತ್ವದ ಸಭೆ ನಡೆಸುವ ಮೂಲಕ ಜಾರಕಿಹೊಳಿ ಬಣದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತೆಲೆಕೆಡಿಸಿಕೊಳ್ಳದ ರಮೇಶ್ ಜಾರಕಿಹೊಳಿ, ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯಲು ತೀವ್ರ ಕಸರತ್ತು ಮಾಡುತ್ತಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ ತೊರೆದು ರಮೇಶ್ ಜಾರಕಿಹೊಳಿ ಜತೆಗೆ ಬಂದ ಶಾಸಕ ಮಹೇಶ್ ಕುಮಠಹಳ್ಳಿ, ಶ್ರೀಮಂತ ಪಾಟೀಲ್ ಅತಂತ್ರರಾಗಿದ್ದು ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಹೇಗಾದರೂ ಮಾಡಿ ತಮ್ಮ ಜೊತೆಗೆ ಬಂದ ಬೆಂಬಲಿಗರಿಗೆ, ತಮಗೆ ಸಚಿವ ಸ್ಥಾನ ಪಡೆದುಕೊಳ್ಳಲು ಜಾರಕಿಹೊಳಿ ದೆಹಲಿ, ಮಹಾರಾಷ್ಟ್ರ ನಾಯಕರ ಮೂಲಕ ಲಾಬಿ ಮಾಡುತ್ತಿದ್ದಾರೆ. ಸದ್ಯ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಬಹುತೇಕ ರಿಲೀಫ್ ಆಗಿದ್ದರಿಂದ ಸಚಿವ ಸಂಪುಟ ವಿಸ್ತರಣೆಯಾದರೆ ಮಂತ್ರಿ ಸ್ಥಾನ ಫಿಕ್ಸ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.