ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಪೊಲೀಸರು ಅಗತ್ಯಬಿದ್ದರೆ ಎನ್ಕೌಂಟರ್ ವಿಧಾನ ಅನುಸರಿಸಬೇಕು ಎಂದು ಬಿಜೆಪಿ ನಾಯಕ ಸುವೆಂದು ಅಧಿಕಾರಿ (Suvendu Adhikari) ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಂತಹ ವ್ಯಕ್ತಿಯಿಂದ ಮಾತ್ರ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಇದೇ ವೇಳೆ ಅಧಿಕಾರಿ ಗಂಭೀರ ಆರೋಪ ಮಾಡಿದರು.
ಇನ್ನೂ ಕಾಲೇಜು ಮೆಟ್ಟಿಲು ಹತ್ತದ ಹೆಣ್ಣು ಮಕ್ಕಳು ಇಂದು ಅನೇಕ ರೀತಿಯಲ್ಲಿ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಇಂದು ಹಂತಕರ ತಾಣವಾಗಿ ಮಾರ್ಪಟ್ಟಿದೆ. ಹೀಗಾಗಿ ಯುಪಿ ಸಿಎಂ ಅವರಂತಹ ಒಬ್ಬರಿಂದ ಮಾತ್ರ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದ್ದಾರೆ. ಇಂತಹ ಕಿಡಿಗೇಡಿಗಳನ್ನು ಎನ್ಕೌಂಟರ್ ಮಾಡಬೇಕು. ಇವರುಗಳಿಗೆ ಮನುಷ್ಯರೊಂದಿಗೆ ವಾಸಿಸುವ ಯಾವುದೇ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುವೆಂದು ಅಧಿಕಾರಿ ಹೇಳಿಕೆಗೆ ಟಿಎಂಸಿ ಶಾಸಕ ತಪಸ್ ರಾಯ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುವೆಂದು ಅವರು ಬಂಗಾಳವನ್ನು ಯೋಗಿ ರಾಜ್ ಆಗಿ ಪರಿವರ್ತಿಸಲು ಬಯಸಿದರೂ ಅದಲ್ಲೆಂದಿಗೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕಿಸ್ತಾನದ ಪತ್ರಿಕೆ, ವೆಬ್ಸೈಟ್, ಟಿವಿ ಸ್ಕ್ರೀನ್ಗಳಲ್ಲಿ ರಾರಾಜಿಸಿದ ಚಂದ್ರಯಾನ-3 ಸಕ್ಸಸ್ ಸುದ್ದಿ
ಅತ್ಯಾಚಾರ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬುದನ್ನು ನಾವು ಕೂಡ ಬಯಸುತ್ತೇವೆ. ಕಾನೂನಿನ ಮೂಲಕವೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ಸುವೆಂದು ಅವರ ಹೇಳಿಕೆಯ ಎನ್ಕೌಂಟರ್ಗಳ ಅರ್ಥವೇನು? ಪಶ್ಚಿಮ ಬಂಗಾಳದ ಜನರು ಸುವೆಂದು ಹೇಳಿಕೆಗೆ ಬೆಂಬಲ ನೀಡಲ್ಲ ಎಂದು ತಿಳಿಸಿದರು.
Web Stories