ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣಾ ಪಟ್ಟಿ ಬಿಡುಗಡೆಗೊಂಡ ಬಳಿಕ ಶ್ರೀರಾಮುಲು ಮತ್ತು ತಿಪ್ಪೇಸ್ವಾಮಿ ಬೆಂಬಲಿಗರ ವಿರುದ್ಧ ಭಿನ್ನಮತ ಏರ್ಪಟ್ಟಿದೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀರಾಮುಲು, ಶುಕ್ರವಾರ ನಡೆದ ಘಟನೆ ನನಗೆ ಮತ್ತು ನಮ್ಮ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ನಿನ್ನೆಯ ಘಟನೆಯಲ್ಲಿ ನನ್ನ ಕಾರು ಜಖಂ ಆಗಿದೆ. ನನ್ನ ಹುಡುಗರ ಮೇಲೆ ಹಲ್ಲೆಯಾಗಿದೆ ಅಷ್ಟೆ. ನನ್ನ ಶರ್ಟ್ ಹರಿದು ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು ವದಂತಿಯಾಗಿದೆಂದು ಅವರು ಹೇಳಿದ್ದಾರೆ.
ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಈ ಹಿಂದೆ ನನ್ನಿಂದ ಗೆದ್ದಿಲ್ಲ ಅಂತಿದ್ದಾರೆ. ಆದರೆ ಇದೀಗ ಅವರಿಗೆ ಸವಾಲು ಹಾಕುವೆ, ತಿಪ್ಪೇಸ್ವಾಮಿಗೆ ಶಕ್ತಿ ಇದ್ದರೇ ಪಕ್ಷೇತರ ಅಭ್ಯರ್ಥಿಯಾಗಲಿ. ಇಲ್ಲವೇ ಬೇರೆಯವರಿಗೆ ಬೆಂಬಲ ನೀಡಿ ಗೆದ್ದು ತೋರಿಸಲಿ ಅಂತ ಸಂಸದ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಬಹಿರಂಗವಾಗಿ ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್
ಅಲ್ಲದೇ ಈ ಘಟನೆಯ ಬಗ್ಗೆ ಪಕ್ಷದ ನಾಯಕರು ನಿನ್ನೆಯೇ ನನ್ನಿಂದ ಮಾಹಿತಿ ಪಡೆದಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದ ಶಾಸಕ ತಿಪ್ಪೇಸ್ವಾಮಿಗೆ 2013ರಲ್ಲಿ ನಾನೇ ಅವರ ಕೈ ಹಿಡಿದು ಗೆಲ್ಲಿಸಿದೆ. ಆದ್ರೆ ಇದೀಗ ಅವರು ತಿರುಗಿ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಕಾಂಗ್ರೆಸ್ ನನ್ನನ್ನೂ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ: ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲು
ಹಿಂದುಳಿದ ಜನಾಂಗದ ಪರ ನಾನು ಹೋರಾಡುತ್ತಿದ್ದೇನೆ. ಕಾಂಗ್ರೆಸ್ ಎಸ್ಸಿ ಎಸ್ಟಿ ಮತಗಳಿಗೋಸ್ಕರ ನನ್ನ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ನವರೂ ಏನೇ ಷಡ್ಯಂತ್ರ ಮಾಡಿದರೂ ನಾನು ಜಗ್ಗುವುದಿಲ್ಲ. ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಕೇವಲ ನಾಮಪತ್ರ ಹಾಕಿ 2-3 ದಿನ ಮಾತ್ರ ಪ್ರಚಾರ ಮಾಡುವೆ. ಉಳಿದ ದಿನಗಳಲ್ಲಿ ನಾನು ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವೆ ಎಂದು ಶ್ರೀರಾಮುಲು ಹೇಳಿದ್ದಾರೆ.