ಬೆಂಗಳೂರು: ಕ್ಯಾಂಟರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸೂರು ಮುಖ್ಯರಸ್ತೆ ಹಳೆ ಚಂದಾಪುರ ಸಮೀಪದ ಆರ್.ಕೆ ಬಾರ್ ಬಳಿ ನಡೆದಿದೆ.
ಮಾಧವನ್(45) ಮೃತ ದುರ್ದೈವಿ. ಇವರು ಮೂಲತಃ ಆಂಧ್ರದವರು. ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ಮದ್ಯಪಾನ ಮಾಡಲೆಂದು ಚಾಲಕ ತೆರಳಿದ್ದಾಗ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿಕೊಂಡಂತಿರೋ ಆರ್.ಕೆ ಬಾರ್ ಮತ್ತು ರೆಸ್ಟೋರೆಂಟ್ ಬಳಿ ಚಾಲಕ ಕ್ಯಾಂಟರ್ ನಿಲ್ಲಿಸಿದ್ದರು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ ರಮೇಶ್ ಒಡೆತನದ ಬಾರ್ ಅಂಡ್ ರೆಸ್ಟೋರೆಂಟ್ ಇದ್ದಾಗಿದೆ.
ಬಾರ್ ಬಳಿಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವ ವಿಚಾರ ತಿಳಿದಿದ್ದರೂ ಪೊಲೀಸರು ಪ್ರಶ್ನೆ ಮಾಡುವುದಿಲ್ಲ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ಸದ್ಯ ಈ ಬಗ್ಗೆ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.