ಬೀದರ್: ರಾಜ್ಯದ ಹಲವೆಡೆ ರಸಗೊಬ್ಬರ ಸಮಸ್ಯೆ ಇದೆ. ರೈತರು ಪರದಾಡ್ತಾ ಇದ್ದಾರೆ. ಆದ್ರೆ ಈ ವಿಚಾರದಲ್ಲಿ ಕೇಂದ್ರದ ರಸಗೊಬ್ಬರ ಸಚಿವ ಭಗವಂತ್ ಖೂಬಾ ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ. ಜೊತೆಗೆ ರೈತರೊಬ್ಬರು ನಮ್ಮ ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದರು. ಇದಕ್ಕೆ ಖಾರವಾಗಿ ಪ್ರತ್ಯುತ್ತರ ನೀಡಿದ್ದು ಗೊಬ್ಬರ ಸಿಗದಿದ್ದರೆ ನಾನೇನು ಮಾಡಲಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ರಸಗೊಬ್ಬರ ವಿತರಣೆ ವಿಚಾರವಾಗಿ ತಮಗೆ ಕರೆ ಮಾಡಿದ ರೈತ ಶ್ರೀಮಂತ ಪಾಟೀಲ್ ಜೊತೆ ಭಗವಂತ್ ಖೂಬಾ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಜೊತೆಗೆ ಸಚಿವರು ಮತ್ತು ರೈತರ ನಡುವಿನ ಸಂಭಾಷಣೆಯ ಆಡಿಯೋ ಕೂಡ ವೈರಲ್ ಆಗಿದೆ. ರೈತನಿಗೆ ಅವಾಚ್ಯ ಶಬ್ಧಗಳಿಂದ ಖೂಬಾ ನಿಂದಿಸಿದ್ದಾರೆ ಎಂದು ಆರೋಪವಿದ್ದು, ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಇದನ್ನೂ ಓದಿ: ಭೂಸ್ವಾಧೀನ ಮಾಡಿಕೊಂಡ ಜಮೀನು ಮಾರುಕಟ್ಟೆ ದರದಲ್ಲಿ ಖರೀದಿಸಲು ರೈತರರಿಂದ ಸಚಿವ ಮುರುಗೇಶ್ ನಿರಾಣಿಗೆ ಒತ್ತಾಯ
ಭಗವಂತ್ ಖೂಬಾ ಬೀದರ್ ಸಂಸದರು ಕೂಡ ಹೌದು. ಹೀಗಾಗಿ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಹೆಡಗಾಪುರದ ರೈತ ಶ್ರೀಮಂತ ಪಾಟೀಲ್, ಸಚಿವರಿಗೆ ಫೋನ್ ಮಾಡಿ ಸರ್ ನಮ್ಮೂರಲ್ಲಿ ಗೊಬ್ಬರ ಸಿಗುತ್ತಿಲ್ಲ ಸಮಸ್ಯೆ ಬಗಹರಿಸಿ ಎಂದು ಕೇಳಿದ್ದಾರೆ. ಇದಕ್ಕೆ ಉಡಾಫೆ ಉತ್ತರ ನೀಡಿದ ಅವರು, ಅದಕ್ಕೆ ನಾನೇನು ಮಾಡ್ಲಿ. ರಾಜ್ಯಕ್ಕೆ ಕಳಿಸೊದಷ್ಟೇ ನನ್ನ ಕೆಲಸ. ಅಲ್ಲಿನ ಶಾಸಕನ್ನು ಕೇಳಿ. ಸಾವಿರಾರು ನೌಕರರು ಇದ್ದಾರೆ ಅವರು ನೋಡ್ಕೋತಾರೆ, ಅವರನ್ನೇ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ ಎಂದಿದ್ದಾರೆ. ಇದರಿಂದ ಸಿಟ್ಟಾದ ರೈತ, ಮುಂದಿನ ಬಾರಿ ಹೇಗೆ ಆರಿಸಿ ಬರ್ತೀರಿ ನೋಡ್ತಿನಿ ಎಂದಿದ್ದಾರೆ. ಇದಕ್ಕೆ, ಮುಂದಿನ ಬಾರಿ ಹೇಗೆ ಗೆಲ್ಲೋದು ನನಗೆ ಗೊತ್ತಿದೆ. ಪ್ರತಿಯೊಬ್ಬ ರೈತರಿಗೂ ಗೊಬ್ಬರ ಸಿಕ್ಕಿದ್ಯಾ ಅಂತಾ ನಾನು ನೋಡೋಕೆ ಆಗುತ್ತಾ ಎಂದು ಅವಾಜ್ ಹಾಕಿದ್ದಾರೆ. ಈ ಅಡಿಯೋ ವೈರಲ್ ಆಗುತ್ತಿದೆ.