ಬೆಂಗಳೂರು: ನಾನು ಡಿಸಿಎಂ ಜಿ ಪರಮೇಶ್ವರ್ ಅವರನ್ನು ಕಳೆದ 40 ವರ್ಷದಿಂದ ನೋಡುತ್ತಿದ್ದೇನೆ. ಅವರು ನನಗೆ ಆಪ್ತರಾಗಿದ್ದು, ಅದೃಷ್ಟ ಒಲಿದರೆ ಸಿಎಂ ಆಗಬಹುದು ಎಂದು ಬಿಜೆಪಿ ಮುಖಂಡ ವಿ ಸೋಮಣ್ಣ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸೋಮಣ್ಣ ಅವರು, ವೇದಿಕೆ ಮೇಲಿದ್ದ ಡಿಸಿಎಂ ಅವರೊಂದಿಗೆ ಇರುವ ಆಪ್ತತೆಯ ಬಗ್ಗೆ ಬಿಚ್ಚಿಟ್ಟರು. ಸಿದ್ದಗಂಗಾ ಮಠಕ್ಕೆ ಅವರ ಕುಟುಂಬದ ಕೊಡುಗೆ ಆಪಾರ. ಸಿದ್ದಗಂಗಾ ಶ್ರೀಗಳಿಂದಲೇ ನನಗೆ ಪರಮೇಶ್ವರ್ ಅವರ ಪರಿಚಯ ಆಯಿತು. ಅಂದಿನಿಂದ ಇಲ್ಲಿಯವರೆಗೂ ಕೂಡ ಅವರನ್ನು ನೋಡಿದ್ದೇನೆ. ಅವರು ಸಿಎಂ ಆಗುವುದು ಹಲವರ ಆಸೆ. ಆದ್ದರಿಂದ ಮುಂದಿನ ದಿನದಲ್ಲಿ ಆದರೂ ಅವರು ಸಿಎಂ ಆಗುತ್ತಾರೆ ಎಂದರು.
ರಾಜ್ಯದ ನಾಯಕರಲ್ಲಿ ಅವಕಾಶ ಸಿಕ್ಕರೆ ಯಾರು ಬೇಕಾದರು ಸಿಎಂ ಆಗಬಹುದು. ಅಂತೆಯೇ ಅದೃಷ್ಟ ಒಲಿದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ಸಿಎಂ ಆಗುತ್ತಾರೆ. ಪರಮೇಶ್ವರ್ ಅವರು ಕೂಡ ಅವಕಾಶ ಸಿಕ್ಕರೆ ಸಿಎಂ ಆಗುತ್ತಾರೆ. ಕುಮಾರಸ್ವಾಮಿ ಅವರು ಕಡಿಮೆ ಸ್ಥಾನ ಪಡೆದು ಸಿಎಂ ಆಗಲಿಲ್ಲವಾ ಎಂದು ಉದಾಹರಣೆ ಕೂಡ ನೀಡಿ, ಯಾರೂ ಅದೃಷ್ಟಕ್ಕಿಂತ ದೊಡ್ಡವರು ಅಲ್ಲ. ಪರಮೇಶ್ವರ್ ಅವರು ಎಲ್ಲ ಪಕ್ಷದ ನಾಯಕರನ್ನು ಒಂದಾಗಿ ಕರೆದುಕೊಂಡು ಹೋಗುವ ಸಾಮಥ್ರ್ಯ ಹೊಂದಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಪರಮೇಶ್ವರ್ ಅವರು, ಸೋಮಣ್ಣ ಕ್ರಿಯಾಶೀಲ ಶಾಸಕರು. ಯಾವುದಾದ್ರು ಒಂದು ಕಾರ್ಯದಲ್ಲಿ ನಿರಂತರವಾಗಿ ತೊಡಗಿರುತ್ತಾರೆ. ನನ್ನ ಪಕ್ಕದ ಕುರ್ಚಿಯಲ್ಲೇ ಅವರನ್ನು ಇಟ್ಟುಕೊಂಡಿದ್ದೆ. ಆದರೆ ರಾತ್ರೋ ರಾತ್ರಿ ಬದಲಾದರು. ಆದರೆ ಒಬ್ಬ ಕ್ರಿಯಾಶೀಲ ನಾಯಕ ಏನ್ನೆಲ್ಲಾ ಕಾರ್ಯ ಮಾಡಬಹುದೋ ಅದೆಲ್ಲಾ ಅವರು ಮಾಡಿದ್ದಾರೆ. ಹಲವು ಯುವ ನಾಯಕರಿಗೆ ಮಾರ್ಗದರ್ಶಿ ನಾಯಕರಾಗಿದ್ದಾರೆ ಎಂದು ಹಾಡಿ ಹೊಗಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv