ಕೆಆರ್ ಪೇಟೆ ಟಿಕೆಟ್ ಆಕಾಂಕ್ಷಿ ಅಲ್ಲ – ನಿಖಿಲ್ ಸ್ಪಷ್ಟನೆ

Public TV
2 Min Read
NIKHIL A

– ಜಿಟಿಡಿ ನನ್ನ ತಂದೆ ಸಮಾನ
– ಎಲ್ಲಾ 17 ಕ್ಷೇತ್ರಗಳಲ್ಲಿ ಸ್ಪರ್ಧೆ

ಬೆಂಗಳೂರು: ನಾನು ಕೆ.ಅರ್.ಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಜೆಡಿಎಸ್ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಜೆಪಿ ಭವನದಲ್ಲಿ ಮಾತಾನಾಡಿದ ಅವರು, ಎರಡು ಮೂರು ದಿನಗಳಿಂದ ಮಾಧ್ಯಮದಲ್ಲಿ ನನ್ನ ಹೆಸರು ಕೇಳಿ ಬರುತ್ತಿದೆ. ಏಕೆ ನನ್ನ ಹೆಸರು ಕೇಳಿ ಬರುತ್ತಿದೆ ಎಂಬುವುದು ಗೊತ್ತಿಲ್ಲ. ಕೆ.ಆರ್.ಪೇಟೆಯಲ್ಲಿ ತುಂಬಾ ಜನ ಆಕಾಂಕ್ಷಿಗಳು ಇದ್ದಾರೆ. ನಾನು ಕೆ.ಆರ್.ಪೇಟೆ ಕ್ಷೇತ್ರದ ಕಾರ್ಯಕರ್ತರ ಸಭೆ ಮಾಡುತ್ತೇನೆ. ಸಭೆ ಮಾಡಿ ಆಕಾಂಕ್ಷಿಗಳ ಪಟ್ಟಿ ಮಾಡಿ ನಾನೇ ವರಿಷ್ಠರಿಗೆ ಕೊಡುತ್ತೇನೆ ಎಂದರು.

jds

ಕ್ಷೇತ್ರ ಅಭ್ಯರ್ಥಿ ಆಯ್ಕೆ ವರಿಷ್ಠರು ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಆದರೆ ನಾನು ಕೆ.ಆರ್.ಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಶಾಸಕನಾಗಬೇಕೆಂಬ ಆಸೆ ಇದ್ದಿದ್ದರೆ ರಾಮನಗರದಲ್ಲೇ ಚುನಾವಣೆ ಎದುರಿಸುತ್ತಿದೆ. ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಬೇಕಾದ್ರು ನಾನು ಸ್ಪರ್ಧೆ ನಡೆಸಬಹುದಿತ್ತು. ಆದರೆ ಜನರ ಜೊತೆಗಿರಲು ಇಷ್ಟ ಪಡುತ್ತೇನೆ. ವರಿಷ್ಠರು ಕೊಟ್ಟ ಪಕ್ಷದ ಕೆಲಸ ಮಾಡುತ್ತೇನೆ ಅಷ್ಟೇ ಎಂದರು. ಅಲ್ಲದೇ ಕೆ.ಆರ್.ಪೇಟೆ ಜೆಡಿಎಸ್ ಭದ್ರ ಕೋಟೆ. ಈ ಬಾರಿ ಅಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಡಿಡಿ ನನ್ನ ತಂದೆ ಸಮಾನ: ಇದೇ ಸಂದರ್ಭದಲ್ಲಿ ಜಿಡಿ ದೇವೇಗೌಡರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿ ದೇವೇಗೌಡರು ನನ್ನ ತಂದೆ ಸಮಾನ. ಜಿಟಿ ಹರೀಶ್ ನನ್ನ ಸಹೋದರ ಇದ್ದಂತೆ. ಅಪ್ಪ-ಮಕ್ಕಳ ಕೊಡುಗೆ ಮೈಸೂರಿಗೆ ಅಪಾರ ಇದೆ. ನಾನು ಹರೀಶ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಅವರಲ್ಲಿ ಸಾಕಷ್ಟು ನೋವಿದೆ. ನೋವಿನಲ್ಲಿ ಸ್ವಲ್ಪ ಹಾಗೆ ಮಾತನಾಡಿರಬಹುದು ಅಷ್ಟೇ. ಅವರ ಮನವೊಲಿಸುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದರು.

gtd

17 ಕ್ಷೇತ್ರದಲ್ಲಿ ಸ್ಪರ್ಧೆ: ಮುಂದೇ ನಡೆಯುವ 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ನಮ್ಮ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಎಲ್ಲಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ನಾನು ಭಾಗವಹಿಸುತ್ತೇನೆ. ಪ್ರತಿ ಕ್ಷೇತ್ರದಲ್ಲಿ ಸಭೆ ಮಾಡಿ, ಆಕಾಂಕ್ಷಿ ಗಳ ಪಟ್ಟಿಯನ್ನ ತಯಾರಿಸಿ ವರಿಷ್ಠರಿಗೆ ನೀಡುವ ಕಾರ್ಯ ಮಾಡುತ್ತೇನೆ. ಈ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದರು.

ಅಂದಹಾಗೇ ಇದೇ ಮೊದಲ ಬಾರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನ ಪಡೆದ ಬಳಿಕ ನಿಖಿಲ್ ಕುಮಾರಸ್ವಾಮಿ ಮೊದಲ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಕ್ಷದ 30 ಜಿಲ್ಲೆಗಳ ಯುವ ಘಟಕ ಅಧ್ಯಕ್ಷರ ಭಾಗವಹಿಸಿದ್ದರು. ಈ ಸಭೆಯಲ್ಲಿ ಸರ್ಕಾರ ಹೋಗಿದೆ ಎಂದು ಯಾರು ಚಿಂತೆ ಮಾಡಬೇಕಿಲ್ಲ. ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಅವರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸಿ. ರೈತರ ಸಾಲಮನ್ನಾ, ಋಣಮುಕ್ತ ಕಾಯ್ದೆ, ಬಡವರ ಬಂಧು ಸೇರಿದಂತೆ ಹಲವು ಯೋಜನೆ ಕುಮಾರಸ್ವಾಮಿ ತಂದಿದ್ದಾರೆ. ಇದೆಲ್ಲವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿ ಎಂದು ಪಕ್ಷದ ಯುವ ಕಾರ್ಯಕರ್ತರಿಗೆ ನಿಖಿಲ್ ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *