– ಟವಲ್ನಲ್ಲಿ ನೇಣು ಹಾಕಿಕೊಂಡು ಸಾವು
ನೆಲಮಂಗಲ: ಕಳೆದ ಎರಡುವರೆ ವರ್ಷಗಳ ಕಾಲ ನಟಿ ಶೃತಿ ಕಾರು ಡ್ರೈವರ್ ಆಗಿ ಕಾರ್ಯನಿರ್ವಹಿಸಿ, ಆರು ತಿಂಗಳ ಹಿಂದೆ ಕೆಲಸ ಬಿಟ್ಟ ಕಾರು ಚಾಲಕ ಮಂಜುನಾಥ್ ಸಿಂಗ್ ಇಂದು ಅನುಮಾನಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಫಾರೆಸ್ಟ್ ಗೇಟ್ ನಲ್ಲಿ ನೇಣಿಗೆ ಶರಣಾಗಿರುವ ಮಂಜುನಾಥ್ ಸಿಂಗ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಮಾಗಡಿ ರಸ್ತೆಯ ಮಾಚೋಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕಳೆದ ಕೆಲವು ವರ್ಷಗಳಿಂದ ನಟಿ ಶೃತಿ ಮತ್ತು ಶರಣ್ ಕಾರ್ ಡ್ರೈವರ್ ಆಗಿದ್ದು ಮಂಜುನಾಥ್, ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಕಡಬಗೆರೆಯಲ್ಲಿ ಪಾರ್ಟಿಗೆ ಹೋಗಿದ್ದ ಎನ್ನಲಾಗಿದೆ. ನಂತರ ಟವಲ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿದ್ದಾನೆ.
ಮಂಜುನಾಥ್ ಸಾವಿನ ಬಗ್ಗೆ ಹಲವು ಅನುಮಾನವನ್ನು ಸಂಬಂಧಿಗಳು ವ್ಯಕ್ತಪಡಿಸುತ್ತಿದ್ದಾರೆ. ಮಂಜುನಾಥ್ ಸಿಂಗ್ ಬಾವ ದೀಪಕ್ ಸಿಂಗ್ ಮಾತನಾಡಿ, ಮಂಜುನಾಥ್ ಸಾಯುವ ವ್ಯಕ್ತಿಯಲ್ಲ. ಪೊಲೀಸರಿಂದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.