ಬೆಂಗಳೂರು: ಸರ್ಕಾರಿ ಜಾಗ ಕಬಳಿಸಲು ರಾತ್ರೋ ರಾತ್ರಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿದ ಘಟನೆ ನಂದಿನಿ ಲೇಔಟ್ನ ಕಂಠೀರವ ನಗರದಲ್ಲಿ ನಡೆದಿದೆ.
ಬಲಮುರಿ ಗಣಪತಿ ದೇವಸ್ಥಾನದ ಮುಂದೆ ಇರುವ ಅರ್ಧ ಎಕರೆ ಸರ್ಕಾರಿ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಓಡಾಡುವ ರಸ್ತೆ ಮಧ್ಯೆದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಸಂಬಂಧ ಕಂಠೀರವ ನಗರದ ನಿವಾಸಿಗಳು ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿ, ಬಲಮುರಿ ಗಣಪತಿ ಟ್ರಸ್ಟ್ ನ ಉಪಾಧ್ಯಕ್ಷ ಮಹೇಶ್ ಎಂಬವರೇ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಿಸಿದ್ದಾರೆ. ಈ ಜಾಗದ ಮುಂದೆ ಸಾರ್ವಜನಿಕರು ಓಡಾಡಲು ಕಾಲು ದಾರಿ ಬಿಡಲಾಗಿತ್ತು. ಆದರೆ ಆ ಜಾಗವನ್ನು ಕಬಳಿಸಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಜಾಗದ ಪಕ್ಕದಲ್ಲೇ ಅಂಬೇಡ್ಕರ್ ಉದ್ಯಾನವನ ಇದೆ. ಅಲ್ಲಿ ಬೃಹತ್ ಅಂಬೇಡ್ಕರ್ ಪ್ರತಿಮೆ ಇದ್ದರೂ ರಸ್ತೆ ಮಧ್ಯೆ ಚಿಕ್ಕ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿರುವುದು ಅಕ್ರಮದ ವಾಸನೆ ತಿಳಿಸುತ್ತದೆ. ಇದನ್ನು ಪ್ರಶ್ನಿಸಿದಕ್ಕೆ ಮಹೇಶ್ ಸ್ಥಳೀಯ ಮಹಿಳೆಯರಿಗೆ ಬೆದರಿಸಿ, ಹೊಡೆದಿದ್ದಾರೆ ಎಂದು ದೂರಿದ್ದಾರೆ.
ಬಲಮುರಿ ಗಣಪತಿ ಟ್ರಸ್ಟ್ ನ ಉಪಾಧ್ಯಕ್ಷ ಮಹೇಶ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಹೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.