ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇಯಲ್ಲಿ (Mysuru-Bengaluru Expressway) ಸಂಚಾರ ಆರಂಭವಾಗಿ ಆರು ತಿಂಗಳಾಗಿದೆ. ಈ ಅವಧಿಯಲ್ಲಿ ಅಪಘಾತಗಳ (Accident) ಸಂಖ್ಯೆ ಹೆಚ್ಚಿದ್ದು, ಕನಿಷ್ಠ 84 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಎಕ್ಸ್ಪ್ರೆಸ್ವೇಯಲ್ಲಿ ವಾಹನ ಸಂಚಾರ ಆರಂಭ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ 335ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ವರದಿ ಆಗಿವೆ.
ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದ ಡಿಸೆಂಬರ್, ಜನವರಿಯಲ್ಲೇ ಹೆಚ್ಚು ಅಪಘಾತಗಳು ಆಗಿವೆ. ಕುಂಬಳಗೋಡಿನಿಂದ ನಿಡಘಟ್ಟವರೆಗಿನ ರಾಮನಗರ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ 110ಕ್ಕೂ ಹೆಚ್ಚು ಆಕ್ಸಿಡೆಂಟ್ ಆಗಿದ್ದು, 41 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 225 ಅಪಘಾತ ಉಂಟಾಗಿದ್ದು, 43 ಸವಾರರು ಬಲಿ ಆಗಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ 30 ಅಪಘಾತ ಉಂಟಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ
ಬಿಡದಿ-ರಾಮನಗರ-ಚನ್ನಪಟ್ಟಣ ಬೈಪಾಸ್ಗಳಲ್ಲಿ ವಾಹನಗಳ ವೇಗ ಹೆಚ್ಚಿರುತ್ತದೆ. ಸರ್ವೀಸ್ ರಸ್ತೆಗಳಲ್ಲೂ ವಾಹನ ಓಡಾಟ ಹೆಚ್ಚಿದೆ. ಅತಿಯಾದ ವೇಗ ಮತ್ತು ಬೇಗ ತಲುಪಬೇಕೆಂಬ ಧಾವಂತವೇ ಅಪಘಾತ ಹೆಚ್ಚಾಗಲು ಕಾರಣವಾಗಿದೆ.