ಬಳ್ಳಾರಿ: ಐತಿಹಾಸಿಕ ಉಜ್ಜಿನಿ ತೈಲಾಭಿಷೇಕಕ್ಕೆ ಕೊರೋನಾ ಭೀತಿ ಎದುರಾಗಿದ್ದು, ಮಂಗಳವಾರ ನಡೆಯಬೇಕಿದ್ದ ಜಾತ್ರೆಯನ್ನು ಉಜ್ಜಿನಿ ಮಠದ ಆಡಳಿತ ಮಂಡಳಿ ರದ್ದು ಮಾಡಿದೆ.
ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿಯಲ್ಲಿ ಪ್ರತಿ ವರ್ಷ ಮರುಳ ಸಿದ್ದೇಶ್ವರ ದೇಗುಲದ ಶಿಖರಕ್ಕೆ ತೈಲಾಭಿಷೇಕ ನಡೆಯುತ್ತಿತ್ತು. ಜಗತ್ತಿನ ಯಾವ ಮೂಲೆಯಲ್ಲೂ ನಡೆಯದ ವಿಶಿಷ್ಟ ತೈಲಾಭಿಷೇಕ ಆಚರಣೆ ಇದಾಗಿದ್ದು, ಲಕ್ಷಾಂತರ ಭಕ್ತರ ಮಧ್ಯೆ ಅಭಿಷೇಕ ಜರುಗುತ್ತಿತ್ತು. ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ನಾಳೆ ನಡೆಯಬೇಕಿದ್ದ ತೈಲಾಭಿಷೇಕ ಮತ್ತು ರಥೋತ್ಸವವನ್ನು ರದ್ದು ಮಾಡಲಾಗಿದೆ. ಉಜ್ಜಿನಿ ಪೀಠದ ಜಗದ್ಗುರುಗಳಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಭಕ್ತರು ಯಾರೂ ಉಜ್ಜಿನಿಗೆ ಬರಬೇಡಿ, ರಥೋತ್ಸವ, ತೈಲಾಭಿಷೇಕ ಎಲ್ಲವನ್ನೂ ರದ್ದು ಮಾಡಲಾಗಿದೆ. ಈ ವರ್ಷ ಭಕ್ತರು ಸಹಕರಿಸಬೇಕು ಎಂದು ಮಠದ ಶ್ರೀಗಳು ಮನವಿ ಮಾಡಿದ್ದಾರೆ. ಲಕ್ಷಾಂತರ ಭಕ್ತರು ಬರುವ ಹಿನ್ನೆಲೆ ಜನರನ್ನು ನಿಯಂತ್ರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ರಥೋತ್ಸವ ರದ್ದುಗೊಳಿಸಲಾಗಿದೆ.