– ಹಿಂಗೇ ಆದ್ರೆ ಕಷ್ಟ ಆಗುತ್ತೆ ಅಂತ ಎಚ್ಚರಿಕೆ ರವಾನೆ
ಬೆಳಗಾವಿ: ಸಭಾಪತಿ ಸ್ಥಾನ ಕೈ ತಪ್ಪಿದ್ದಕ್ಕೆ ಜೆಡಿಎಸ್ನ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ ಮತ್ತು ಸಿಎಂ ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಕೇವಲ ಹೆಬ್ಬೆಟ್ಟು ಸಿಎಂ ಆಗಿದ್ದಾರೆ. ಕಾಂಗ್ರೆಸ್ನವರು ಹೇಳಿದ್ದಕ್ಕೆ ಅವರು ಹೆಬ್ಬೆಟ್ಟು ಒತ್ತುತ್ತಿದ್ದಾರೆ. ಹೀಗಾದರೆ ಕಷ್ಟ ಆಗುತ್ತದೆ. ಮುಖ್ಯ ಕಾರ್ಯದರ್ಶಿ ಹುದ್ದೆ, ಕೆಪಿಎಸ್ಸಿ ಹುದ್ದೆ ಆಗಲಿ ಕಾಂಗ್ರೆಸ್ ಹೇಳಿದ ಹಾಗೆ ಮುಖ್ಯಮಂತ್ರಿಗಳು ಹೆಬ್ಬೆಟ್ಟು ಹಾಕುತ್ತಿದ್ದಾರೆ ಎಂದು ಬಸವರಾಜ ಹೊರಟ್ಟಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ನವರು ಹೇಳಿದಂತೆ ಕೇಳಲಾಗುತ್ತಿದೆ. ಈ ರೀತಿ ಮಾಡದಂತೆ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಈ ಹಿಂದೆ ಹಂಗಾಮಿ ಸದಸ್ಯನಾಗಿದ್ದೆ. ಹೀಗಾಗಿ ಸರ್ಕಾರ ವಿರುದ್ಧ ಮಾತನಾಡಲು ಹಿಂದೇಟು ಹಾಕುತ್ತಿದ್ದೆ. ಈಗ ನನಗೆ ಯಾರ ಹಂಗು ಇಲ್ಲ. ಕಾಂಗ್ರೆಸ್ ಮೈತ್ರಿ ಸೂತ್ರ ಪಾಲಿಸುತ್ತಿಲ್ಲ. ಸರ್ಕಾರ ರಚಿಸುವಾಗ ಕಾಂಗ್ರೆಸ್ನವರೇ ಷರತ್ತು ರಹಿತ ಅಂತ ಹೇಳಿದ್ದರು. ಈಗ ಷರತ್ತು ಹಾಕುತ್ತಿದ್ದಾರೆ ಎಂದು ಸಿಟ್ಟು ಹೊರಹಾಕಿದರು.
ಪ್ರತಿಕ್ರಿಯೆ ನೀಡಲು ನಾಯಕರು ಹಿಂದೇಟು:
ಬಸವರಾಜ್ ರೊಟ್ಟಿ ಅವರ ಹೇಳಿಕೆಯಿಂದ ಮೈತ್ರಿ ಸರ್ಕಾರದ ನಾಯಕರು ಫುಲ್ ಸುಸ್ತು ಆಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ. ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್, ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv