ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಕೆ.ಎಸ್ ಈಶ್ವರಪ್ಪ ಹೇಳಿಕೆ ಅಶಾಂತಿ ಉಂಟುಮಾಡುವ ಹೇಳಿಕೆಯಾಗಿದೆ. ಪೊಲೀಸ್ ತನಿಖೆ ನಡೆಯದೇ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿರುವ ಶಾಂತಿಯನ್ನ ಕದಡಿ ಯಾರನ್ನೋ ಸಿಲುಕಿಸುವ ಯತ್ನ ಎಂದು ವಿಧಾನಸೌಧದಲ್ಲಿ ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಪರಿಷತ್ನಲ್ಲಿ ಮಾತನಾಡಿದ ಅವರು, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರಪ್ಪರ ಹೇಳಿಕೆ ಸರಿಯಲ್ಲ. ಇದು ಅಶಾಂತಿ ಸೃಷ್ಟಿಸುವ ಹೇಳಿಕೆಯಾಗಿದೆ. ಇದು ಅವರ ಸ್ಥೂಲ ಕಲ್ಪನೆ, ಅಪರಾಧಿಗಳು ಯಾರು ಎಂಬುದು ಇನ್ನೂ ತನಿಖೆಯೇ ಆಗಿಲ್ಲ. ಈಗಲೇ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸಲು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ನಾವು ರಾಜೀನಾಮೆ ಕೇಳುತ್ತಿದ್ದೇವೆ, ಅದನ್ನ ಅವರು ಕೊಡಲೇಬೇಕು. ಪೊಲೀಸರ ತನಿಖೆಯಾಗದೆ ಆಪಾದನೆ ಮಾಡುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುವುದು ಅವರ ಜವಾಬ್ದಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಏನು ಮಾಡುತ್ತಿದೆ. ಡಿ.ಕೆ ಶಿವಕುಮಾರ್ ಮೇಲೆ ಆಪಾದನೆ ಮಾಡಿ ಏನೂ ಸಾಧಿಸಲಾಗದು. ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಸಚಿವರಾಗಿದ್ದಾರೆ. ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ ಅವರಿಗೆ, ಬಿಜೆಪಿ ಅವರಿಗೆ ಹೊಸದಲ್ಲ. ಈ ಹಿಂದೆಯೂ ಶಿವಮೊಗ್ಗದಲ್ಲಿ ಕೊಲೆ ನಡೆದಿತ್ತು, ಆಗಲೂ ಮುಸ್ಲಿಂರ ಮೇಲೆ ಆಪಾದನೆ ಮಾಡಿದ್ರು, ಆ ಬಳಿಕ ಹಿಂದೂಗಳು ತಪ್ಪಿಸ್ಥರು ಅಂತಾ ಗೊತ್ತಾಯ್ತು ಎಂದು ಈಶ್ವರಪ್ಪ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೊಲೆ ಆದವರು ಸಹ ಒಂದು ಸಲ ಗಡಿಪಾರು ಆಗಿದ್ದರು. ಇಂಟಲಿಜೆನ್ಸ್ ಏನ್ ಮಾಡ್ತಾ ಇತ್ತು. ಇದೊಂದು ಇಂಟಲಿಜೆನ್ಸ್ ಫೇಲ್ಯೂರ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.