ಬೆಂಗಳೂರು: ಶಾಲಾ, ಕಾಲೇಜುಗಳಿಗೆ ರಜೆ ವಿಸ್ತರಣೆಗೊಳಿಸುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಜಬ್ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಸೂಕ್ಷ್ಮ ವಿಚಾರವಾಗಿದ್ದು, ಉಡುಪಿಯಲ್ಲಿ ಆದ ಘಟನೆ ಇಡೀ ರಾಜ್ಯಕ್ಕೆ ಹರಡುವ ಕೆಲಸ ಆಗುತ್ತಿದೆ. ಹೀಗಾಗಿ ಈ ಬಗ್ಗೆ ಗೃಹ, ಶಿಕ್ಷಣ ಇಲಾಖೆ ಸೇರಿ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಇದೇ ವೇಳೆ ಶಾಲಾ, ಕಾಲೇಜುಗಳಿಗೆ ರಜೆ ವಿಸ್ತರಣೆಗೊಳಿಸುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ ನಾಳೆ, ನಾಡಿದ್ದು, ಸಿಎಂ ಜೊತೆ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಶೀಘ್ರವೇ ತೀರ್ಪು ಬರುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್
ವಿರೋಧ ಪಕ್ಷದ ನಾಯಕರು ಕಾಲೇಜು ಕ್ಲೋಸ್ ಮಾಡಿ ಅಂತ ಹೇಳಿದ್ದರು. ಸಿದ್ದರಾಮಯ್ಯ ಅವರ ಮಾತನ್ನು ಪರಿಗಣಿಸಿ ರಜೆ ಕೊಡಲಾಗಿದೆ. ಎಲ್ಲಾ ನಾಯಕರ ಅಭಿಪ್ರಾಯ ಪಡೆದು ಶಾಲೆ ಪ್ರಾರಂಭದ ಬಗ್ಗೆ ತೀರ್ಮಾನ ಮಾಡುತ್ತೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಲ್ಲಿ ಮನಸ್ಸು ಕೆಡಬಾರದು. ನಿತ್ಯ ಮಕ್ಕಳು ಶಾಲೆಯಲ್ಲಿ ಮುಖ ನೋಡಬೇಕು. ಹೀಗಾಗಿ ನಾವು ಮಕ್ಕಳನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮಠದ ಸ್ವಾಮೀಜಿಗಳು ಕೂಡಾ ಸಮವಸ್ತ್ರ ಇರಬೇಕು. ಸಮವಸ್ತ್ರ ಪಾಲನೆ ಆಗಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಯಾಧೀಶರು ತೀರ್ಪು ಕೊಡುತ್ತಾರೆ. ಕೋರ್ಟ್ ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಸರ್ಕಾರದ ಆದೇಶ ಪಾಲನೆ ಮಾಡಬೇಕು. ಅಲ್ಲಿಯವರೆಗೂ ಸಮವಸ್ತ್ರ ಧರಿಸಿ ಕಾಲೇಜಿಗೆ ಬನ್ನಿ ಯಾರು ಕೂಡಾ ಮಕ್ಕಳ ಮನಸ್ಸು ಹಾಳು ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ
ಈ ಪ್ರಕರಣದ ಹಿಂದೆ ಯಾವ ಪಕ್ಷದ ಲೀಗಲ್ ಸೆಲ್ ಕೆಲಸ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಮೊದಲು ತಿಳಿದುಕೊಳ್ಳಲಿ. ಯಾರ ಮನೆಯಲ್ಲಿ ಕೂತು ಏನು ವಾದ ಮಾಡಬೇಕು ಅಂತ ಚರ್ಚೆ ಆಗುತ್ತಿದೆ. ಆಮೇಲೆ ಯಾರು ಕೇಸರಿ ಶಾಲು ಬುಕ್ ಮಾಡಿದ್ದಾರೆ ಎಂಬುವುದರ ಬಗ್ಗೆ ಮಾತನಾಡಲಿ. 1983 ರಲ್ಲಿ ಕಾಯ್ದೆ ಬಂದಾಗ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. 1995 ರಲ್ಲೂ ಬಿಜೆಪಿ ಅಧಿಕಾರಿದಲ್ಲಿ ಇರಲಿಲ್ಲ. ಅವರಿಗೆ ಮಕ್ಕಳ ಬಗ್ಗೆ ಕಳಕಳಿ ಇಲ್ಲ. ಆದರೆ ಎಲೆಕ್ಷನ್ಗೆ ಇನ್ನೊಂದು ವರ್ಷ ಇರುವುದರಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಮಕ್ಕಳು ರೂಲ್ಸ್ ಪಾಲನೆ ಮಾಡಿ, ಕಾನೂನು ಪಾಲನೆ ಮಾಡಿ ಅಂತ ನಾಯಕರು ಹೇಳಬೇಕೆ ಹೊರತು ದ್ವೇಷದ ಭಾವನೆ ಉಂಟು ಮಾಡಬಾರದು ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.