ನವದೆಹಲಿ: ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗಬಹುದಾದರೆ, ನ್ಯಾಯಾಧೀಶರ ಮಕ್ಕಳು ವಕೀಲರಾಗುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ಹೈಕೋರ್ಟ್ ನ್ಯಾಯಾಧೀಶೆ ಸ್ವರ್ಣ ಕಾಂತ ಶರ್ಮಾ (Justice Swarana Kanta Sharma) ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈಕೋರ್ಟ್ ನ್ಯಾ. ಸ್ವರ್ಣ ಕಾಂತ ಶರ್ಮಾ ಅವರು ಆರ್ಎಸ್ಎಸ್ (RSS) ಮತ್ತು ಬಿಜೆಪಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ದೆಹಲಿ ಅಬಕಾರಿ ನೀತಿ ಪ್ರಕರಣದ (Delhi Excise Policy Case) ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅರವಿಂದ್ ಕೇಜ್ರಿವಾಲ್ (Arvind Kejriwal) ಅರ್ಜಿ ಸಲ್ಲಿಸಿದ್ದರು.
ಬರಿ ಊಹೆಗಳ ಆಧಾರದ ಮೇಲೆ ನ್ಯಾಯಾಧೀಶರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಕೇಜ್ರಿವಾಲ್ ಅರ್ಜಿಯನ್ನು ನ್ಯಾ. ಸ್ವರ್ಣಕಾಂತ ಶರ್ಮಾ ವಜಾಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ವಿರುದ್ಧ ಕೇಳಿ ಬಂದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ನ್ಯಾಯಮೂರ್ತಿಗಳು ಹೇಳಿದ್ದೇನು?
ಒಬ್ಬ ಅರ್ಜಿದಾರರು ನ್ಯಾಯಾಂಗ ಸಂಸ್ಥೆಯನ್ನೇ ವಿಚಾರಣೆಗೆ ಒಳಪಡಿಸಿದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ನ್ಯಾಯಾಧೀಶರ ಮೇಲಿನ ಇಂತಹ ಆರೋಪಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಂದಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಫಿಡವಿಟ್ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್

ಕೇಜ್ರಿವಾಲ್ ಅವರು ತಮ್ಮನ್ನು ಒಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಸಿದ್ದಾರೆ.ಒಂದು ವೇಳೆ ನಾನು ಪ್ರಕರಣದಿಂದ ಹಿಂದೆ ಸರಿದರೆ ಕೇಜ್ರಿವಾಲ್ ಗೆದ್ದಂತಾಗುತ್ತದೆ, ಒಂದು ವೇಳೆ ಮುಂದುವರಿದರೆ ಅವರು ಪಕ್ಷಪಾತದ ಆರೋಪ ಮಾಡುತ್ತಲೇ ಇರುತ್ತಾರೆ. ಇಂತಹ ಮೀಡಿಯಾ ಪ್ರೇರಿತ ನಿರೂಪಣೆಗಳಿಗೆ ತಾವು ಬಗ್ಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನೀವು ಆರ್ಎಸ್ಎಸ್ ಸಂಯೋಜಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ: ದೆಹಲಿ ಹೈಕೋರ್ಟ್ನಲ್ಲಿ ಕೇಜ್ರಿವಾಲ್ ವಾದ
ನ್ಯಾಯಾಧೀಶರ ಮಕ್ಕಳ ವೃತ್ತಿಜೀವನದ ಮೇಲೆ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ. ಮಕ್ಕಳು ಸ್ವತಂತ್ರವಾಗಿ ವೃತ್ತಿ ಮಾಡುತ್ತಿದ್ದಾರೆ ಮತ್ತು ಈ ಪ್ರಕರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗಬಹುದಾದರೆ, ನ್ಯಾಯಾಧೀಶರ ಮಕ್ಕಳು ವಕೀಲರಾಗುವುದರಲ್ಲಿ ತಪ್ಪೇನಿಲ್ಲ. ಯಾವುದೇ ಪುರಾವೆಗಳಿಲ್ಲದೆ ನ್ಯಾಯಾಧೀಶರ ಕುಟುಂಬದವರ ಮೇಲೆ ಇಂತಹ ಆರೋಪಗಳನ್ನು ಮಾಡಬಾರದು ಎಂದು ಎಚ್ಚರಿಸಿದರು.
ತೀರ್ಪು ನೀಡದೆ ನಾನು ನನ್ನ ಕರ್ತವ್ಯವನ್ನು ಅರ್ಧಕ್ಕೆ ಬಿಡಲು ಸಾಧ್ಯವಿಲ್ಲ. ನಿರಾಕರಣೆ ಎಂಬುದು ಸುಲಭವಾದ ಮಾರ್ಗವಾಗಬಹುದು, ಆದರೆ ನ್ಯಾಯಾಧೀಶರ ಹುದ್ದೆಯ ಘನತೆಯು ಸಂಯಮ ಮತ್ತು ಮೌನವನ್ನು ಬಯಸುತ್ತದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಯಾರೋ ಒಬ್ಬರು ನನ್ನನ್ನು ವಿಚಾರಣೆಯಿಂದ ಹಿಂದೆ ಸರಿಯಲು ಕೇಳಿದ್ದಾರೆ. ಇದರಿಂದ ನಾನು ‘ನಿರಾಕರಣೆ ನ್ಯಾಯಶಾಸ್ತ್ರ’ (Recusal Jurisprudence) ಬಗ್ಗೆ ಸಾಕಷ್ಟು ಕಲಿತಿದ್ದೇನೆ ಎಂದು ತಿಳಿಸಿದರು.
ಏನಿದು ಪ್ರಕರಣ?
ಈ ವರ್ಷದ ಫೆಬ್ರವರಿ 27 ರಂದು ಕೆಳ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಇತರ 22 ಜನರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ (CBI) ಹೈಕೋರ್ಟ್ ಮೊರೆ ಹೋಗಿತ್ತು. ಈ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು ಕೆಳ ನ್ಯಾಯಾಲಯದ ಆದೇಶವು ಮೇಲ್ನೋಟಕ್ಕೆ ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು ಕೇಜ್ರಿವಾಲ್ ಆತಂಕಕ್ಕೆ ಕಾರಣವಾಗಿತ್ತು.
ನ್ಯಾಯಮೂರ್ತಿಗಳ ಮಕ್ಕಳು ಕೇಂದ್ರ ಸರ್ಕಾರದ ಪ್ಯಾನಲ್ ವಕೀಲರಾಗಿದ್ದಾರೆ ಮತ್ತು ಸಿಬಿಐ ಪರ ಹಾಜರಾಗುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮೂಲಕ ಕೆಲಸ ಪಡೆಯುತ್ತಿದ್ದಾರೆ, ಆದ್ದರಿಂದ ಇಲ್ಲಿ ಹಿತಾಸಕ್ತಿ ಸಂಘರ್ಷವಿದೆ ಎಂದು ಕೇಜ್ರಿವಾಲ್ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದರು.

