ನವದೆಹಲಿ: ಒಮಾನ್ (Oman) ಕರಾವಳಿ ಸಮೀಪ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದ್ದು, ಹಡಗಿನಲ್ಲಿದ್ದ 14 ಭಾರತೀಯ ಸಿಬ್ಬಂದಿಯಲ್ಲಿ 13 ಮಂದಿಯನ್ನು ರಕ್ಷಿಸಲಾಗಿದೆ. ಓರ್ವ ಭಾರತೀಯ ಸಿಬ್ಬಂದಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಭಾನುವಾರ ತಿಳಿಸಿದೆ.
ದಾಳಿ ನಡೆದ ಹಡಗನ್ನು ಎಂಟಿ ಎಲ್ ಗಯಾ (MT El Gaia) ಎಂದು ಗುರುತಿಸಲಾಗಿದೆ. ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಸಚಿವಾಲಯ ಖಂಡಿಸಿದೆ. ಒಮಾನ್ ಕರಾವಳಿ ಸಮೀಪ ಇಂದು ನಡೆದ ಹಡಗಿನ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಹಡಗಿನಲ್ಲಿದ್ದ 14 ಭಾರತೀಯ ಸಿಬ್ಬಂದಿಯಲ್ಲಿ 13 ಮಂದಿಯನ್ನು ಈವರೆಗೆ ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಭಾರತೀಯ ಪ್ರಜೆಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪಂಜಾಬ್ ಪೊಲೀಸ್ ಠಾಣೆಯಲ್ಲಿ ಸ್ಫೋಟ – 2 ಕಾರುಗಳ ಗಾಜು ಪುಡಿಪುಡಿ
ಭಾರತೀಯ ರಾಯಭಾರ ಕಚೇರಿ ಒಮಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಕ್ರಿಯವಾಗಿ ಸಮನ್ವಯಗೊಳಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಈ ಪ್ರದೇಶದಲ್ಲಿ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎಂಇಎ ಒತ್ತಾಯಿಸಿದೆ. ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ – ಅರಮನೆಗೆ ಎರಡನೇ ಹಂತದ ಗಜಪಡೆ ಆಗಮನ
ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ತಕ್ಷಣ ಕಡಿಮೆಗೊಳಿಸಿ, ಶಾಂತಿ ಸ್ಥಾಪನೆಗಾಗಿ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸಬೇಕು ಎಂದು ಭಾರತ ಪುನರುಚ್ಚರಿಸಿದೆ. ವಾಣಿಜ್ಯ ಹಡಗುಗಳು, ನಾವಿಕರು, ನಾಗರಿಕರು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಸ್ವೀಕಾರಾರ್ಹವಲ್ಲ ಎಂದು ಎಂಇಎ ಹೇಳಿದೆ. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರ ಹಾಗೂ ವ್ಯಾಪಾರದ ಹರಿವನ್ನು ಆದಷ್ಟು ಬೇಗ ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಏಷ್ಯಾ ಕಪ್ ಚಾಂಪಿಯನ್ಸ್ – ಕಿರಿಯರ ಹಾಕಿಯಲ್ಲಿ ಭಾರತದ ಐತಿಹಾಸಿಕ ಡಬಲ್ ಧಮಾಕಾ
ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಘಟನೆಯ ಕುರಿತು ಮಾಹಿತಿ ನೀಡಿದ್ದು, ಪನಾಮಾ ಧ್ವಜ ಹೊಂದಿರುವ ಎಲ್ ಗಯಾ ಹಡಗಿನಲ್ಲಿದ್ದ 14 ಭಾರತೀಯರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ
13 ಭಾರತೀಯ ಸಿಬ್ಬಂದಿಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ. ನಾಪತ್ತೆಯಾಗಿರುವ ಓರ್ವ ಸಿಬ್ಬಂದಿಗಾಗಿ ಒಮಾನ್ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಇದನ್ನೂ ಓದಿ: ಗಜೇಂದ್ರಗಡದಲ್ಲಿ ಪಟಾಕಿ ಕಿಡಿ ಸಿಡಿದು ಗೊಡೌನ್ಗೆ ಬೆಂಕಿ; ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿ

