ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ (Palace Ground) ನಡೆಯುತ್ತಿರುವ ಪುನೀತ ಪರ್ವ(Puneeth Parva) ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಗಳಗಳನೇ ಅಳುತ್ತಾ ವೇದಿಕೆ ಮೇಲಿಂದ ಹೊರನಡೆದಿದ್ದಾರೆ.
ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯಿಸಿರುವ ಡಾಕ್ಯೂಮೆಂಟರಿ ಫಿಲ್ಮ್ ಗಂಧದ ಗುಡಿ ( Gandhada Gudi) ಪ್ರೀ ರಿಲೀಸ್ ಇವೆಂಟ್ ಇಂದು ಅದ್ದೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ಸೇರಿದಂತೆ ಬಹುಭಾಷಾ ತಾರೆಯರು ಆಗಮಿಸಿದ್ದು, ಪುನೀತ್ ಜೊತೆಗೆ ಕಳೆದ ಸವಿನೆನಪುಗಳನ್ನು ವೇದಿಕೆ ಮೇಲೆ ಮೆಲುಕು ಹಾಕಿದ್ದಾರೆ.
ಇದೇ ವೇಳೆ ಅಪ್ಪು ಅಭಿನಯಿಸಿದ್ದ ಬ್ಲಾಕ್ ಬಾಸ್ಟರ್ ಹಿಟ್ ರಾಜಕುಮಾರ ಸಿನಿಮಾದ ನೀನೇ ರಾಜಕುಮಾರ ಹಾಡನ್ನು, ಅಶ್ವಿನಿ ಪುನೀತ್ ರಾಜ್ ಕುಮಾರ್, ಅವರ ಪುತ್ರಿ ದ್ವಿತೀಯ ಪುತ್ರಿ ವಂದಿತ, ಡಾ. ಶಿವರಾಜ್ ಕುಮಾರ್ (Shiva RajKumar), ರಾಘವೇಂದ್ರ ರಾಜ್ಕುಮಾರ್ (Raghavendra Rajkumar), ವಿನಯ್ ರಾಜ್ ಕುಮಾರ್, ಯುವ ರಾಜ್ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬಸ್ಥರು ವೇದಿಕೆ ಮೇಲೆ ಕಣ್ಣೀರಿಡುತ್ತಲೇ ಹಾಡಿದರು.
ಈ ವೇಳೆ ಅಪ್ಪು ನೆನೆದು ಭಾವುಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕುತ್ತಾ, ಅಭಿಮಾನಿಗಳಿಗೆ ನಮಸ್ಕರಿಸಿ ವೇದಿಕೆ ಮೇಲಿಂದ ಹೊರ ನಡೆದಿದ್ದಾರೆ. ಇನ್ನೂ ಹಾಡು ಮುಕ್ತಾಯವಾಗುತ್ತಿದ್ದಂತೆ ಅಭಿಮಾನಿಗಳು ಅಪ್ಪು, ಅಪ್ಪು ಎಂದು ಜೈಕಾರ ಕೂಗಿದರು. ಒಟ್ಟಾರೆ ಒಂದು ನಿಮಿಷ ನೀರವ ಮೌನ ಆವರಿಸಿದ್ದ ಅರಮನೆ ಮೈದಾನ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದೇ ಹೇಳಬಹುದು.