ಗಜಪಡೆ (Gajapade) ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ನಿರ್ಮಾಪಕಿ, ಪುನೀತ್ ರಾಜ್ ಕುಮಾರ್ ಬಗ್ಗೆ ನಿಂದನೆ ಪೋಸ್ಟ್ ಮಾಡಿರುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವರು ಈ ನಡೆಯನ್ನು ಖಂಡಿಸಿದ್ದಾರೆ. ಜೊತೆಗೆ ಅಪ್ಪು ಫ್ಯಾನ್ಸ್ ಕಾನೂನಾತ್ಮಕ ಹೋರಾಟಕ್ಕೂ ಮುಂದಾಗಿದ್ದಾರೆ. ಸದ್ಯ ಬಿಟಿಎಂ ಲೇ ಔಟ್, ಜೆ ಪಿ ನಗರ ಹಾಗೂ ತಲಘಟ್ಟಪುರದ ಪೊಲೀಸ್ ಠಾಣೆಯಲ್ಲಿ ಗಜಪಡೆ ಖಾತೆಯ ವಿರುದ್ಧ ದೂರು (Complaint) ನೀಡಲಾಗಿದೆ.
ಅಶ್ವಿನಿ (Ashwini Puneeth Rajkumar) ಬಗ್ಗೆ ಅವಹೇಳನಕಾರಿ ಪೋಸ್ಟ್ (Post) ಮಾಡಿದವರ ವಿರುದ್ಧ ಕ್ರಮಕ್ಕೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ವಿರೋಧಿ ಪೋಸ್ಟ್ ಗಳು ಹರಿದಾಡುತ್ತಿವೆ. ಜೊತೆಗೆ ಸಿನಿಮಾ ರಂಗದ ಅನೇಕರು ಪೋಸ್ಟ್ ವಿರುದ್ಧ ಧ್ವನಿ ಎತ್ತಿದ್ದಾರೆ. ಈಗ ಅಪ್ಪು ಫ್ಯಾನ್ಸ್ ಗೃಹ ಸಚಿವರನ್ನು ಭೇಟಿ ಮಾಡಿ, ಕ್ರಮಕ್ಕಾಗಿ ಒತ್ತಾಯ ಮಾಡಿದ್ದಾರೆ. ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಕೂಡ ಕಠಿಣ ಕ್ರಮದ ಮಾತುಗಳನ್ನು ಆಡಿದ್ದಾರೆ.
ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರ್ಸಿಬಿ ಸೋಲಿಗೆ ಅಶ್ವಿನಿ ಅವರೇ ಕಾರಣ ಎಂದು ನಿಂದಿಸಿದವರಿಗೆ ನವರಸನಾಯಕ ಜಗ್ಗೇಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಣ್ಣುಕುಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆಗ್ತಾರಾ ಎಂದು ಜಗ್ಗೇಶ್ (Jaggesh) ಹಿಡಿಶಾಪ ಹಾಕಿದ್ದಾರೆ.
ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು. ತಾಯಿ ಬೆಲೆ ಗೊತ್ತಿರಬೇಕು. ಒಂದು ವೇಳೆ, ತಾಯಿ ಮತ್ತು ಹೆಣ್ಣಿಗೆ ಗೌರವ ಕೊಡಲ್ಲ ಎಂದರೆ ಖಂಡಿತಾ ಅಂಥವರು ಮನುಕುಲಕ್ಕೆ ಅನರ್ಹ. ಪುನೀತನ ಮಡದಿ ಅನಾಥಳಲ್ಲ ತನ್ನ ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ ಎಂದು ಜಗ್ಗೇಶ್ ಅಪ್ಪು ಅಭಿಮಾನಿಗಳ ಕಡೆ ತೋರಿಸಿದ್ದಾರೆ. ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ಧಾರ ಆದ ಇತಿಹಾಸವಿಲ್ಲ ಎಂದು ಜಗ್ಗೇಶ್ ಅಶ್ವಿನಿ ಪರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ಪ್ರತಿಕ್ರಿಯೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳು 19ನೇ ತಾರೀಕಿನಂದು ಬೆಂಗಳೂರಿನ ಆರ್ಸಿಬಿ ಅನ್ಬಾಕ್ಸ್ ಇವೆಂಟ್ನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್ಸಿಬಿ ತಂಡ ಕೆಲ ಪಂದ್ಯಗಳಲ್ಲಿ ಸೋತಿದೆ. ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ಗಜಪಡೆ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆರ್ಸಿಬಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತಂಡ ಸೋತಿದೆ ಎಂದು ನಿಂದಿಸಲಾಗಿದೆ. ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ‘ಸುದೀಪ್ ಅಭಿಮಾನಿ’ ಎಂದು ಖಾತೆಯ ಹೆಸರು ಬದಲಿಸಿದ್ದಾರೆ. ಇದರ ವಿರುದ್ಧ ಅಪ್ಪು ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಕಾನೂನು ಸಮರ ಸಾರಿದ್ದಾರೆ.