ಧಾರವಾಡ: ನಾನು ಕಾಂಗ್ರೆಸ್ ಕಡೆ ಹೊರಟಿದ್ದೇನೆ ಎಂದು ಕೆಲ ಮಾಧ್ಯಮಗಳಲ್ಲಿ ಬಂದಿತ್ತು. ನಾನು ಅದನ್ನ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಾನು ಹಿಂದೂತ್ವವಾದಿ, ನನ್ನ ಏಳಿಗೆ ಸಹಿಸದೇ ಕೆಲವರು ಈ ರೀತಿ ಮಾಡಿದ್ದಾರೆ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕಡೆ ಹೊರಟಿದ್ದೇನೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಕಡೆ ಹೊರಟಿದ್ದೇನೆ ಎಂದು ಮತ್ತೆ-ಮತ್ತೆ ಮಾಧ್ಯಮಗಳಲ್ಲಿ ಬರುತ್ತಿದೆ. ಅದಕ್ಕೆ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ. ನಾನು ಹಿಂದುತ್ವವಾದಿ. ನನಗೆ ಬಿಜೆಪಿ ಪಕ್ಷ ಗುರುತಿಸಿ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ನನಗೆ ಬೇಡದವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್
ನಮ್ಮ ಭಾಗದ ಜನರಿಗೆ ಹಾಗೂ ಕ್ಷೇತ್ರದ ಜನರಿಗೆ ಸ್ಪಷ್ಟಪಡಿಸುತ್ತೇನೆ. ಪಕ್ಷದ ವರಿಷ್ಠರಿಗೆ ಇದನ್ನ ಗಮನಕ್ಕೆ ತಂದಿದ್ದೇನೆ. ನನ್ನ ಬದ್ಧತೆ ಬಗ್ಗೆ ಅವರು ಕೂಡಾ ಮಾತನಾಡಿದ್ದಾರೆ. ನನ್ನ ಅಭಿವೃದ್ಧಿ ನೋಡಿ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಎರಡು ಬಾರಿ ನಾನು ಶಾಸಕನಾಗಿದ್ದೇನೆ. ಈ ಬಾರಿ ಹೆಚ್ಚಿನ ಮತದಿಂದ ಗೆದ್ದಿದ್ದೇನೆ ಎಂದ ಅವರು, ನನ್ನ ಏಳಿಗೆ ಸಹಿಸಲಾರದೇ ಈ ರೀತಿ ಮಾಡಿದ್ದಾರೆ. ಬೇರೆ ಪಕ್ಷದಿಂದಲೇ ನಮ್ಮ ಪಕ್ಷಕ್ಕೆ ಕೆಲವರು ಬರುತ್ತಿದ್ದಾರೆ. ನಮ್ಮ ಪಕ್ಷದಿಂದ ಯಾರೂ ಹೋಗುತ್ತಿಲ್ಲ. ತಿಂಗಳ ಕೊನೆಯಲ್ಲಿ ಯಾರೆಲ್ಲ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ತಿಳಿಯಲಿದೆ ಎಂದರು.
ಸಿಎಂ ಬೊಮ್ಮಾಯಿ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ವರಿಷ್ಠರು ಕೂಡಾ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಯಾರೋ ನಾನು ಪಕ್ಷ ಬಿಟ್ಟು ಹೋಗುವ ಬಗ್ಗೆ ಪತ್ರಿಕೆಗಳಿಗೆ ಈ ರೀತಿ ಮಾಹಿತಿ ನೀಡುತ್ತಿದ್ದಾರೆ ಅಂತಾ ವರಿಷ್ಠರು ತಲೆ ಕೆಡಿಸಿಕೊಳ್ಳದಂತೆ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಡಿಕೆಶಿಯನ್ನು ಭೇಟಿಯಾದ ಆನಂದ್ ಸಿಂಗ್
ಸಚಿವರು ಕೈಗೆ ಸಿಗಲ್ಲ ಎಂಬ ಶಾಸಕ ರೇಣುಕಾಚಾರ್ಯರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದನ್ನ ಅವರನ್ನೇ ಕೇಳಿ. ಅದು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡುವ ವಿಚಾರ. ನಾನು ಸುಖಾಸುಮ್ಮನೆ ತಲೆ ಕೆಡಿಸಿಕೊಳ್ಳಲ್ಲ. ಸಣ್ಣ-ಸಣ್ಣ ಆರೋಪ ಬರುವುದು ಸಹಜ ಎಂದು ಸ್ಪಷ್ಟನೆ ಕೊಟ್ಟರು.