ಮಂಡ್ಯ: ಬೆಂಗಳೂರು, ಮಂಡ್ಯ ನಗರದಲ್ಲಿ ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆಯಾಗಿದ್ದು ನಿಮಗೆ ಗೊತ್ತೆ ಇದೆ. ಈಗ ತಾಲೂಕು ಕೇಂದ್ರಗಳಲ್ಲಿಯೂ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭವಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಅಭಿಮಾನಿ ನಾಗೇಶ್ ಅಪ್ಪಾಜಿ ಕ್ಯಾಂಟೀನ್ ತೆರೆದಿದ್ದು, ನಗರದ, ಮಹಾವೀರ ಸರ್ಕಲ್ನಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ. ಜಿಲ್ಲೆಯ ಪಾಂಡವಪುರದಲ್ಲಿ ಸಂಸದ ಪುಟ್ಟರಾಜು ಅವರು ಅಪ್ಪಾಜಿ ಕ್ಯಾಂಟೀನ್ನನ್ನು ಉದ್ಘಾಟಿಸಿದರು.
ಅಪ್ಪಾಜಿ ಕ್ಯಾಟೀನ್ ನಲ್ಲಿ ಕಡಿಮೆ ದರದಲ್ಲಿ ಊಟ, ತಿಂಡಿ ದೊರೆಯಲಿದ್ದು, ಟೀ, ಕಾಫಿ 5 ರೂ. ಮತ್ತು ತಿಂಡಿಗೆ 10 ರೂ. ದರವನ್ನು ನಿಗದಿ ಪಡಿಸಲಾಗಿದೆ. ಇಡ್ಲಿ, ವಡೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಖಾಲಿದೋಸೆ, ಸೆಟ್ ದೋಸೆ, ಮಸಾಲೆ ದೋಸೆ, ಚಪಾತಿ, ಮುದ್ದೆ, ಅನ್ನಸಾಂಬಾರ್ ಕ್ಯಾಂಟೀನ್ನಲ್ಲಿ ದೊರೆಯುತ್ತದೆ.
ಈ ಹಿಂದೆ ಜಿಲ್ಲೆಯಲ್ಲಿ ಇದೇ ರೀತಿ ಅಪ್ಪಾಜಿ ಕ್ಯಾಂಟೀನ್, ರಮ್ಯಾ ಕ್ಯಾಂಟೀನ್, ಅಣ್ಣಾ ಕ್ಯಾಂಟೀನ್ಗಳನ್ನ ತೆರೆಯಲಾಗಿದ್ದು, ಇದು ಎಲೆಕ್ಷನ್ ಗಿಮಿಕ್ ಇರಬಹುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ಮತ್ತೊಂದು ಕಡೆ ಕಡಿಮೆ ಬೆಲೆಗೆ ಉತ್ತಮ ಊಟ ತಿಂಡಿ ಸಿಗುತ್ತದೆ. ಇದರಿಂದ ನಮಗೆ ಉಪಯೋಗವಾಗುತ್ತದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.