ದಿಸ್ಪುರ್: 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ಐವರು ನಕ್ಸಲರನ್ನು ದೋಷಿಗಳೆಂದು ಗುವಾಹಟಿಯ (Guwahati) ಎನ್ಐಎ ವಿಶೇಷ ಕೋರ್ಟ್ (Special NIA court) ಬುಧವಾರ ತೀರ್ಪು ಪ್ರಕಟಿಸಿದೆ.
ಮಣಿಪುರದ ದಿಲೀಪ್ ಸಿಂಗ್, ಅಸ್ಸಾಂನ (Assam) ಸೆಂಜಮ್ ಧೀರೇನ್ ಸಿಂಗ್, ಅರ್ನಾಲ್ಡ್ ಸಿಂಗ್, ಪಶ್ಚಿಮ ಬಂಗಾಳದ ಇಂದ್ರನೀಲ್ ಚಂದಾ ಮತ್ತು ಅಮಿತ್ ಬಾಗ್ಚಿ ಶಿಕ್ಷೆಗೊಳಗಾದ ಅಪರಾಧಿಗಳು. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ
ಪೀಪಲ್ಸ್ ಲಿಬರೇಶನ್ ಆರ್ಮಿ ನಕ್ಸಲ್ ಸಂಘಟನೆ ಸಂಬಂಧದ ಪ್ರಕರಣದಲ್ಲಿ ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಐಪಿಸಿ ಸೆಕ್ಷನ್ (Indian Penal Code) 121 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (Unlawful Activities Prevention) ಕಾಯಿದೆ 1967 ರ ಸೆಕ್ಷನ್ 18, 18 ಎ ಮತ್ತು 39 ರ ಆರೋಪದಡಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಪಿಎಲ್ಎ (PLA) ಸಹಾಯದಿಂದ ಸಿಪಿಐ (ಮಾವೋವಾದಿ) ನಕ್ಸಲರು ದೇಶವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದೆ ಎಂಬ ಮಾಹಿತಿ ಮೇರೆಗೆ 2011ರ ಜು. 1ರಂದು ಎನ್ಐಎ (NIA) ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು.
ತನಿಖೆಯ ವೇಳೆ ಕೋಲ್ಕತ್ತಾದಲ್ಲಿ ಪಿಎಲ್ಎ ಕಚೇರಿ ತೆರೆದಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ 2010 ರಲ್ಲಿ 76 ಸಿಆರ್ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದಿದ್ದಕ್ಕಾಗಿ ಪಿಎಲ್ಎನ ಅಧ್ಯಕ್ಷ ಸಿಪಿಐ (Maoist) ಪ್ರಧಾನ ಕಾರ್ಯದರ್ಶಿಯನ್ನು ಅಭಿನಂದಿಸಿದ್ದಾರೆ ಎಂಬುದು ತಿಳಿದು ಬಂದಿತ್ತು.
ಪಿಎಲ್ಎ, ಮಾವೋವಾದಿ ಕಾರ್ಯಕರ್ತರಿಗೆ ಬೆಂಬಲ ನೀಡಿದೆ. ನಿರಂತರವಾಗಿ ಇಮೇಲ್ ಮೂಲಕ ಸಂಪರ್ಕದಲ್ಲಿವೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಅಲ್ಲದೆ ಅಪರಾಧಿಗಳು ಭಾರತದ ಒಳಗೆ ಮತ್ತು ಹೊರಗೆ ವಿವಿಧ ಸ್ಥಳಗಳಿಗೆ ನಕಲಿ ಗುರುತಿನ ಚೀಟಿಗಳನ್ನು ಬಳಸಿ ಪ್ರಯಾಣಿಸಿದ್ದಾರೆ. ಅಲ್ಲದೆ ಅವುಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ದ ಎನ್ಐಎ 2012 ರ ಮೇ 21 ಮತ್ತು ನವೆಂಬರ್ 16 ರಂದು ಹಾಗೂ ಜುಲೈ 31, 2014 ರಂದು ಗುವಾಹಟಿಯ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ಆರೋಪ ಪಟ್ಟಿಗಳನ್ನು ಸಲ್ಲಿಸಿತ್ತು. ಇದನ್ನೂ ಓದಿ: ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು