– ಆಹಾರ ಇಲಾಖೆಯೇ ನೀಡಿದೆ ಅಕ್ರಮ ಅಕ್ಕಿಯ ರಿಪೋರ್ಟ್
ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ರಮ ಪ್ರಾಮಾಣಿಕ ಐಎಎಸ್ ಅಧಿಕಾರಿಯ ಸಾವಿಗೆ ಕಾರಣವಾಯ್ತ? ಅನ್ನಭಾಗ್ಯದಲ್ಲಿ ನಿಜಕ್ಕೂ ಅಂತಹ ದೊಡ್ಡ ಹಗರಣ ನಡೆದಿರೋ ಸಾಧ್ಯತೆ ಇದೆಯಾ? ಹೌದು ಅಂತಿದೆ ಆಹಾರ ಇಲಾಖೆಗೆ ರಿಪೋರ್ಟ್. ಅನ್ಯಭಾಗ್ಯದ ಅಕ್ಕಿ ಅಕ್ರಮವೆಸಗುವವರ ಸ್ವತ್ತಾಗಿರೊ ಅಂಶವನ್ನ ಸ್ವತಃ ಇಲಾಖೆಯೇ ಹೊರಹಾಕಿದ್ದು, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಅಕ್ಕಿ ನುಂಗಣ್ಣರ ಪಾಲಾಗಿದೆ.
2013ರಲ್ಲಿ ಅಧಿಕಾರ ಸ್ವೀಕಾರ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರು. ಯೋಜನೆ ಪ್ರಾರಂಭ ಮಾಡಿ ನಾಲ್ಕು ವರ್ಷ ಆದ್ರೂ ಅಕ್ರಮ ತಡೆಯಲು ಮಾತ್ರ ಸಾಧ್ಯವಾಗಿಲ್ಲ. ಸರ್ಕಾರದ ಅಂಕಿ ಅಂಶದ ಪ್ರಕಾರವೇ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಕಳೆದ ಮೂರುವರೆ ವರ್ಷದಲ್ಲಿ ಆಹಾರ ಇಲಾಖೆ 414 ಪ್ರಕರಣ ದಾಖಲಿಸಿಕೊಂಡು ಬರೋಬ್ಬರಿ 34 ಸಾವಿರ ಕ್ವಿಂಟಾಲ್ ಅಕ್ರಮ ಅಕ್ಕಿ ವಶಪಡಿಸಿಕೊಂಡಿದೆ. ಅಂದ್ರೆ ಬರೋಬ್ಬರಿ 34 ಲಕ್ಷ ಕೆಜಿ ಅಕ್ಕಿ ವಶವಾಗಿದೆ. ಇದರ ಮೊತ್ತ ಸುಮಾರು 11 ಕೋಟಿ ರೂ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಗುರುಪಾಟೀಲ ಶಿರವಾಳ ಕೇಳಿದ ಪ್ರಶ್ನೆಗೆ ಸ್ವತಃ ಆಹಾರ ಸಚಿವ ಖಾದರ್ ಈ ಉತ್ತರ ನೀಡಿದ್ದಾರೆ.
2013-14 ರಲ್ಲಿ ದಾಖಲಾದ ಒಟ್ಟು ಪ್ರಕರಣಗಳು 70, ವಶಪಡಿಸಿಕೊಂಡ ಅಕ್ಕಿ 8832 ಕ್ವಿಂಟಾಲ್, ಅಕ್ಕಿಯ ಮೌಲ್ಯ 2.88 ಕೋಟಿ ರೂ. 2014-15ರಲ್ಲಿ ದಾಖಲಾದ ಒಟ್ಟು ಪ್ರಕರಣಗಳು 193, ವಶಪಡಿಸಿಕೊಂಡ ಅಕ್ಕಿ 16211 ಕ್ವಿಂಟಾಲ್ ಹಾಗೂ ಅಕ್ಕಿಯ ಮೌಲ್ಯ 4.91 ಕೋಟಿ ರೂ. 2015-16ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 118, ವಶಪಡಿಸಿಕೊಂಡ ಅಕ್ಕಿ 4384 ಕ್ವಿಂಟಾಲ್, ಇದರ ಮೌಲ್ಯ 1.62 ಕೋಟಿ ರೂ. 2016-17 ಅಂದ್ರೆ ಅಕ್ಟೋಬರ್ 2016 ವರೆಗೆ ದಾಖಲಾದ ಪ್ರಕರಣಗಳು 33, ವಶಪಡಿಸಿಕೊಂಡ ಅಕ್ಕಿ 4566 ಕ್ವಿಂಟಾಲ್ ಹಾಗೂ ಅಕ್ಕಿಯ ಮೌಲ್ಯ 1.69 ಕೋಟಿ ರೂಪಾಯಿಯದ್ದಾಗಿದೆ.
ಅನ್ನಭಾಗ್ಯ ಹಗರಣದ ರಿಪೋರ್ಟ್ ತಯಾರಿಸಿದ್ರಾ ತಿವಾರಿ?: ಕೇವಲ ಕಣ್ಣಿಗೆ ಬಿದ್ದ ಅಕ್ರಮ 11 ಕೋಟಿ ರೂ. ಆದ್ರೆ ಕಣ್ಣಿಗೆ ಕಾಣದ ಅದೆಷ್ಟೋ ಕೋಟಿ ಮೌಲ್ಯದ ಅಕ್ಕಿ ದಂಧೆಕೋರರ ಪಾಲಾಗಿದೆ. ಇದನ್ನ ಪತ್ತೆ ಹಚ್ಚಿದ್ದೇ ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರ ಸಾವಿಗೆ ಕಾರಣ ಅನ್ನೋ ಆರೋಪ ಬಲವಾಗ್ತಿದೆ.