ಬೆಂಗಳೂರು: ಹಿರಿಯ ನಟಿ ಲೀಲಾವತಿಯವರ (Leelavathi) ನಿಧನಕ್ಕೆ ವಿಧಾನಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು. ಕಲಾಪ ಪ್ರಾರಂಭವಾದ ತಕ್ಷಣ ಉಪಸಭಾಪತಿಗಳು ಸಂತಾಪ ಸೂಚನೆ ಓದಿದರು. ಇದಕ್ಕೆ ಸಭಾ ನಾಯಕರ ಬೋಸರಾಜು, ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರು ಸಹ ದನಿಗೂಡಿಸಿದರು.
ಸಂತಾಪ ಸೂಚನೆ ವೇಳೆ ಮಾತನಾಡಿದ ನಟಿ ಹಾಗೂ ಪರಿಷತ್ ಸದಸ್ಯೆ ಉಮಾಶ್ರೀ (Umashree), ಲೀಲಾವತಿಯವರು ಬಾಲ್ಯದಿಂದ ಸಾವಿನವರೆಗೂ ಸಂಘರ್ಷದ ಜೀವನ ಮಾಡಿಕೊಂಡು ಬಂದವರು. ಇಷ್ಟು ಸಂಘರ್ಷಗಳನ್ನು ಜಯಿಸಿಕೊಂಡು ಬಂದಿದ್ದರು. ಲೀಲಾವತಿ ಮಾಡದ ಪಾತ್ರಗಳೇ ಇಲ್ಲ. ನಾವು ನಟರಾಗಿದ್ದರು ಅವರ ನಟನೆಗೆ ಸಾಟಿ ಅಲ್ಲ. ಪಾತ್ರಕ್ಕೆ ತಕ್ಕ ನ್ಯಾಯ ಹಾಗೂ ಪೋಷಣೆಯನ್ನು ಅವರು ಒದಗಿಸುತ್ತಿದ್ದರು ಎಂದು ಲೀಲಾವತಿಯವರ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಲೀಲಾವತಿ 3ನೇ ದಿನದ ಕಾರ್ಯ- ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿಸಿದ ವಿನೋದ್ ರಾಜ್
ಸೋಲದೇವನಹಳ್ಳಿಯಲ್ಲಿ ಅವರು ಮಾಡಿದ ಸೇವೆ ಅಲ್ಲಿನ ಜನರು ಹೇಳುತ್ತಾರೆ. ಅಂತಹ ತಾಯಿಯ ಸೇವೆಯನ್ನು ಪುತ್ರ ವಿನೋದ್ ರಾಜ್ (Vinod Raj) ಮಾಡಿದ್ದಾರೆ. ವಿನೋದ್, ತಾಯಿಗೆ ತಕ್ಕ ಮಗ, ಲೀಲಾವತಿಯವರೂ ಸಹ ಮಗನಿಗೆ ತಕ್ಕ ತಾಯಿ ಎಂದು ಅವರು ಹೇಳಿದ್ದಾರೆ.
ಲೀಲಾವತಿಯವರು ನಾಯಕಿ ಪಾತ್ರ ಮಾಡಿದ್ದರೂ ಸಹ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ನಾನು ಅವರ ಜೊತೆ ಗೋಲ್ಮಾಲ್ ರಾಧಾಕೃಷ್ಣ ಚಲನಚಿತ್ರ ಮಾಡಿದ್ದೇನೆ. ಅಂತಹ ಮಹಾತಾಯಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಿ ಬರುವುದಿಲ್ಲ. ವಿನೋದ್ ರಾಜ್ ಒಂಟಿಯಲ್ಲ, ಆತನಿಗೂ ಭಗವಂತ ಶಕ್ತಿ ಕೊಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಬಣ್ಣದ ಬದುಕಿನ ನಟಿಯ ಜೀವನ ವರ್ಣರಂಜಿತವಾಗಿರಲಿಲ್ಲ: ಶೋಭಾ ಕರಂದ್ಲಾಜೆ