ದುಬೈ: ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಕಾಳಗ ಆರಂಭವಾಗಿದೆ. ಮತ್ತೊಮ್ಮೆ ಭಾರತ – ಪಾಕಿಸ್ತಾನ ಸೂಪರ್ ಸಂಡೇನಲ್ಲಿ ಎದುರಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ ಶುರುವಾಗಿದೆ.
ನಾಳಿನ ಸೂಪರ್ ಸಂಡೇನಲ್ಲಿ ಭಾರತ-ಪಾಕಿಸ್ತಾನ 2ನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಏಷ್ಯಾಕಪ್ನ ಲೀಗ್ ಹಂತದಲ್ಲಿ ಒಂದು ಬಾರಿ ಇತ್ತಂಡಗಳು ಮುಖಾಮುಖಿಯಾಗಿದ್ದವು. ಇದೀಗ ಸೂಪರ್ ಫೋರ್ ಹಂತದಲ್ಲಿ ಮತ್ತೊಮ್ಮೆ ಹೋರಾಟಕ್ಕೆ ಎರಡು ತಂಡಗಳು ಸಿದ್ಧಗೊಂಡಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳ ಕ್ರಿಕೆಟ್ ಪ್ರಿಯರು ಇಂಡೋ-ಪಾಕ್ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಗೆಲುವಿಗಾಗಿ ಇತ್ತಂಡಗಳು ಭಾರೀ ಕಸರತ್ತನ್ನೇ ನಡೆಸಿವೆ.
ಲೀಗ್ ಹಂತದ ಸೋಲಿನ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಹೋಂಚು ಹಾಕುತ್ತಿದ್ದರೆ, ಇತ್ತ ಭಾರತ ತನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಯಲು ಸಮರಾಭ್ಯಾಸ ನಡೆಸುತ್ತಿದೆ.
ಕಳೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 19.5 ಓವರ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 147 ರನ್ಗಳಿಸಿತ್ತು. ಅಲ್ಪಮೊತ್ತದ ಗುರಿ ಬೆನ್ನತ್ತಿದ್ದ ಭಾರತ ತಂಡ 19.4 ಓವರ್ಗಳಲ್ಲೇ 5 ವಿಕೆಟ್ ನಷ್ಟಕ್ಕೆ 148 ರನ್ಗಳಿಸಿ ಬದ್ಧವೈರಿಗಳ ಹುಟ್ಟಡಗಿಸಿತ್ತು. ಇದನ್ನೂ ಓದಿ: ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD
ಟೀಂ ಇಂಡಿಯಾ ಎದುರು ಸೋತು ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ತಂಡ ತನ್ನ 2ನೇ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ನಿಗದಿತ ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಅಲ್ಲದೇ ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡವನ್ನು 10.4 ಓವರ್ಗಳಲ್ಲಿ 38 ರನ್ಗಳಿಗೆ ಕಟ್ಟಿಹಾಕಿತು.
ಪಾಕ್ ತಂಡದ ಈ ಅಮೋಘ ಪ್ರದರ್ಶನ ಕಂಡ ಮಾಜಿ ಕ್ರಿಕೆಟಿಗರು ಭಾನುವಾರವೂ ಟೀಂ ಇಂಡಿಯಾ ಎದುರು ಇದೇ ರೀತಿ ಆಡುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಯಾಸಿರ್ ಅರಾಫರ್, `ದಯವಿಟ್ಟು ನೀವು ಇಂದು ಆಡಿದಂತೆ ಭಾನುವಾರವೂ ಆಡಿ’ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ
ನಾಳೆ ಸೂಪರ್ ಫೋರ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿವೆ. ಆದರೆ ಕಳೆದ ಪಂದ್ಯದಲ್ಲಿ 29 ಎಸೆತಗಳಲ್ಲಿ 35 ರನ್ ಸಿಡಿಸಿ ತಂಡದ ಗೆಲುವಿಗೆ ಶ್ರಮಿಸಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಮತ್ತೊಬ್ಬ ಆಲ್ರೌಂಡರ್ ಅಕ್ಷರ್ ಪಟೇಲ್ ತಂಡ ಸೇರಿಕೊಂಡಿದ್ದಾರೆ. ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್ ಸಿಗಲಿದೆಯೇ ಇದು ತಂಡದಲ್ಲಿ ಬದಲಾವಣೆ ತರುವ ಸಾಧ್ಯತೆಗಳಿವೆಯೇ ಎಂಬುದನ್ನು ಕಾದು ನೋಡಬೇಕಿದೆ.