ಚೆನ್ನೈ: ಮುಖ್ಯಮಂತ್ರಿ ಜೋಸೆಫ್ ವಿಜಯ್ ಪರವಾಗಿ ವಿಶ್ವಾಸ ಮತ ಚಲಾಯಿಸಿದ ಸಿ.ವಿ ಷಣ್ಮುಗಂ ಸೇರಿ ಇತರ 26 ಶಾಸಕರನ್ನು ಎಐಎಡಿಎಂಕೆ ಪಕ್ಷದಿಂದ ವಜಾಗೊಳಿಸಿರುವುದಾಗಿ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ದಳಪತಿ ವಿಜಯ್ ಪರ ಸಿವಿ ಷಣ್ಮುಗಂ ಬಣದ ನಾಯಕರು ವಿಶ್ವಾಸ ಮತ ಚಲಾಯಿಸಿದ ಕೆಲ ಗಂಟೆಗಳ ಬಳಿಕ ಅಣ್ಣಾಡಿಎಂಕೆ ಮುಖ್ಯಸ್ಥರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಸದನದಲ್ಲಿ ಸಂಖ್ಯಾಬಲ ಸಾಬೀತುಪಡಿಸಬೇಕಾದ ಟಿವಿಕೆ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ನಿನ್ನೆಯೇ ವಿಪ್ ಜಾರಿಗೊಳಿಸಲಾಗಿತ್ತು. ಆದ್ರೂ ವಿಜಯ್ ಅವರ ಪರವಾಗಿ ಮತಚಲಾಯಿಸಿ ಪಕ್ಷಕ್ಕೆ ವಿರೋಧಿ ನಡೆದ ತೋರಿಸಿದ್ದಾರೆ. ಹೀಗಾಗಿ ಮತ ಚಲಾಯಿಸಿದ ಶಾಸಕರನ್ನ ಪಕ್ಷ ವಿರೋಧಿ ಚಟುವಟಿಕೆ ಕಾಯ್ದೆ ಅಡಿಯಲ್ಲಿ ವಜಾಗೊಳಿಸಲಾಗಿದೆ ಎಂದು ಪಳನಿಸ್ವಾಮಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ತಮ್ಮ ನಿವಾಸದಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಪಳನಿಸ್ವಾಮಿ, ಷಣ್ಮುಗಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ವಿಜಯ್ ಸರ್ಕಾರಕ್ಕೆ 144 ಶಾಸಕರ ಬೆಂಬಲ
ಇಂದು ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಪಾಸ್ ಆಗಿದ್ದಾರೆ. ಸರ್ಕಾರಕ್ಕೆ 144 ಮಂದಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಟಿವಿಕೆ, ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಮ್ ಲೀಗ್, ವಿಸಿಕೆ ಜೊತೆ ಎಐಎಡಿಎಂಕೆಯ ಬಂಡಾಯ ಎದ್ದಿರುವ 27 ಶಾಸಕರು ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ಬಹುಮತ ಸಾಬೀತು ಪಡಿಸುವ ವೇಳೆ ಡಿಎಂಕೆ ಮತ್ತು ಪಿಎಂಕೆ ಶಾಸಕರು ಸಭಾತ್ಯಾಗ ಮಾಡಿದರು. ಒಬ್ಬ ಬಿಜೆಪಿ ಶಾಸಕರು ಮತದಾನದಿಂದ ದೂರ ಉಳಿದರು. ಅದರೆ ಸದನದಲ್ಲಿದ್ದ 22 ಎಐಎಡಿಎಂಕೆ ಶಾಸಕರು ವಿಶ್ವಾಸಮತದ ವಿರುದ್ಧ ಮತ ಹಾಕಿದರು.

234 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿದೆ. ವಿಜಯ್ ತಿರುಚಿ ಪಶ್ಚಿಮ ಮತ್ತು ಪೆರಂಬೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಹಿನ್ನೆಲೆ ಅದನ್ನು ಒಂದು ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ತಿರುಪತ್ತೂರು ಟಿವಿಕೆ ಶಾಸಕ ಶ್ರೀನಿವಾಸ್ ಸೇತುಪತಿ ಅವರಿಗೆ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆ ವಿಧಾನಸಭೆಯ ಬಲ 232ಕ್ಕೆ ಇಳಿದಿದ್ದು, ಬಹುಮತಕ್ಕೆ 116 ಶಾಸಕರ ಬೆಂಬಲ ಅಗತ್ಯವಿತ್ತು.
ಸರ್ಕಾರದ ಪರ ಮತ ಎಷ್ಟು?
ಟಿವಿಕೆ – 106
ಕಾಂಗ್ರೆಸ್ – 05
ಎಡಪಕ್ಷಗಳು – 04
ವಿಸಿಕೆ – 02
ಮುಸ್ಲಿಂ ಲೀಗ್ – 02
ಎಐಎಡಿಎಂಕೆ – 27

