ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಡಕಟ್ಟು ಜನಾಂಗದ ತುಂಬು ಗರ್ಭಿಣಿಯೊಬ್ಬರು ಮಗು ಸಮೇತ ಮೃತಪಟ್ಟ ಹೀನಾಯ ಘಟನೆಯೊಂದು ನಡೆದಿದೆ.
ಈ ಘಟನೆ ಕಳೆದ ವಾರ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮಹಿಳೆಯ ಮನೆಯ ಹತ್ತಿರಲ್ಲಿ ಯಾವುದೇ ಹೆಲ್ತ್ ಕೇರ್ ಸೆಂಟರ್ ಇಲ್ಲದೇ ಇರುವುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಗರ್ಭಿಣಿ ಮಗುವಿಗೆ ಜನ್ಮ ನೀಡಲು ಕೆಲ ದಿನಗಳಷ್ಟೇ ಬೇಕಾಗಿತ್ತು. ಆದರೆ ಅದಕ್ಕಿಂತಲೇ ಮೊದಲೇ ವಿಪರೀತ ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ 28 ವರ್ಷದ ತುಂಬು ಗರ್ಭಿಣಿ ವೈದ್ಯರನ್ನು ಭೇಟಿಯಾಗಲು ನಗರ ಪ್ರದೇಶಕ್ಕೆ ಬರಲು ಸುಮಾರು 20 ಕಿ.ಮೀ ದೂರ ನಡೆದಿದ್ದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಗೆ ಬಂದು ವೈದ್ಯರನ್ನು ಬೇಟಿ ಮಾಡಿ ವಾಪಸ್ ಹೋಗುವವರಿದ್ದರು. ಆದರೆ ಅದಾಗಲೇ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಯೊಳಗೆ ಕರೆದೊಯ್ಯಲಾಯಿತು. ಆದರೆ ಕೆಲ ನಿಮಿಷಗಳಲ್ಲೇ ಮಹಿಳೆಗೆ ವಿಪರೀತ ರಕ್ತಸ್ರಾವವಾಗಿದ್ದು, ಹೊಟ್ಟೆಯೊಳಗಿದ್ದ ಮಗು ಸಮೇತ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಪೆಡಬಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಅಂಬುಲೆನ್ಸ್ ವಿಳಂಬದಿಂದಾಗಿ ಹೆದ್ದಾರಿಯಲ್ಲೇ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.