ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಿಜೆಪಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಕಾಂತಾರ ಗೆಲುವಿನ ಬೆನ್ನಲ್ಲೇ ಬಿಜೆಪಿಯು (BJP) ಶೆಟ್ಟರಿಗೆ ಗಾಳ ಹಾಕಲಾಗುತ್ತಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ತಾವು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದರೂ, ಆಗಾಗ್ಗೆ ರಾಜಕೀಯ ಪಡಸಾಲೆಯಲ್ಲಿ ಅವರ ಹೆಸರು ಕೇಳುವುದು ನಿಂತಿರಲಿಲ್ಲ. ಇದೀಗ ರಿಷಬ್ ಶೆಟ್ಟಿ ಬದಲಾಗಿ ಅವರ ಆಪ್ತರಿಬ್ಬರು ಬಿಜೆಪಿ ಪರ ಕಣಕ್ಕೆ ಇಳಿದಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಟೀಮ್ ನಲ್ಲಿ ಗುರುತಿಸಿಕೊಂಡಿರುವ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ (Pramod Shetty) ಮತ್ತು ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ (Shine Shetty) ಈ ಬಾರಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ
ತಮ್ಮ ಪರವಾಗಿ ಪ್ರಚಾರ ಮಾಡಲು ಬಂದಿರುವ ಪ್ರಮೋದ್ ಶೆಟ್ಟಿ ಮತ್ತು ಶೈನ್ ಶೆಟ್ಟಿ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಗುರುರಾಜ ಗಂಟಿಹೊಳೆ (Gururaj Gantihole) ಇಬ್ಬರೂ ಕಲಾವಿದರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನಿಮ್ಮಿಂದಾಗಿ ಈ ಬಾರಿ ಬೈಂದೂರಲ್ಲಿ (Bynduru) ಮತ್ತೆ ಬಿಜೆಪಿ ಗೆಲ್ಲಲಿದೆ ಎಂದು ಬರೆದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ರಾಜಕಾರಣದಿಂದ ದೂರ ಉಳಿದಿದ್ದರೂ ಆಪ್ತ ಪ್ರಮೋದ್ ಪ್ರಚಾರಕ್ಕೆ ಬಂದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಶೆಟ್ಟಿ ಅಂಡ್ ಟೀಮ್ ಈ ಬಾರಿ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ, ಪ್ರಮೋದ್ ಅದನ್ನು ಸುಳ್ಳಾಗಿಸಿದ್ದಾರೆ.