ಕಲಬುರಗಿ: ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರ ತೆಲುಗು ನಟ ಮಾಜಿ ಮಂತ್ರಿ ಬಾಬು ಮೋಹನ್ ಆಲಿಯಾಸ್ ನಲ್ಲರಾಮಮೂರ್ತಿ ಪ್ರಚಾರ ಮಾಡಿದರು.
ಪ್ರಚಾರ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮಾಜಿ ಸಿಎಂ ಅಲ್ಲ, ಯಾವಾಗಲೂ ಮುಖ್ಯಮಂತ್ರಿಯೇ. ಸದ್ಯ ದೇಶದಲ್ಲಿ ಜನ ಮೋದಿ ಮೋದಿ ಅಂತಿದ್ದಾರೆ, ಅವರು ಮತ್ತೆ ಪ್ರಧಾನಿ ಆಗುತ್ತಾರೆ ಎಂದರು.
ಭಾಷಣದ ವೇಳೆ ತಮ್ಮ ಸಿನಿಮಾ ಡೈಲಾಗ್ ಹೇಳಿ ರಂಜನೆ ನೀಡಿದ ನಟ ಬಾಬು ಮೋಹನ್ ಅವರು, ಮೋದಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಸ್ವಚ್ಛ ಭಾರತ ಯೋಜನೆ ಅಡಿ ಶೌಚಾಲಯ, ರಸ್ತೆ ಅಭಿವೃದ್ಧಿ ಸೇರಿದಂತೆ ಅನೇಕ ಕಾಮಗಾರಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಯಾವಾಗಲು ದೋಚುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು.
ಆಡಳಿತ ಅವಧಿಯಲ್ಲಿ ಯಾವ ಯೋಜನೆಯಲ್ಲಿ ಎಷ್ಟು ಹಣ ಕಬಳಿಸಬೇಕೆಂದು ಕಾಂಗ್ರೆಸ್ ಚಿಂತೆ ಮಾಡುತ್ತದೆ. ಆದರೆ ಬಿಜೆಪಿ ಸರ್ಕಾರ ಕಳೆದ 5 ವರ್ಷದ ಅವಧಿಯಲ್ಲಿ ಯಾವುದೇ ಹಗರಣ ಮಾಡದೇ ಅನೇಕ ಜನಪರ ಕೆಲಸ ಮಾಡಿದೆ. ದೇಶದಕ್ಕೆ ಕಾಂಗ್ರೆಸ್, ಟಿಡಿಪಿ, ಟಿಆರ್ ಎಸ್ ಶೂನ್ಯವಾಗಿವೆ. ಈ ಬಾರಿ ತೆಲಂಗಾಣದಲ್ಲಿ ಬಿಜೆಪಿ 5 ರಿಂದ 6 ಎಂಪಿ ಸ್ಥಾನ ಗೆಲ್ಲುತ್ತೆ. ಕರ್ನಾಟಕದಲ್ಲೂ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.