ಬಾಗಲಕೋಟೆ: ಎರಡೂವರೆ ಕೆಜಿಯಷ್ಟು ಚಿನ್ನಾಭರಣ, 12 ಕೆಜಿಯಷ್ಟು ಬೆಳ್ಳಿ, 16 ಲಕ್ಷ ಬ್ಯಾಂಕ್ ಡೆಪಾಸಿಟ್ ಹಣ, ಮನೆಯಲ್ಲಿ ಬಗೆದಷ್ಟು ಬಯಲಾಗುತ್ತಿರುವ ಸಂಪತ್ತು, 9 ಗಂಟೆ ಕಳೆದರೂ ಮುಗಿಯದ ಶೋಧಕಾರ್ಯ. ಇದು ಯಾವುದೋ ಸಿನಿಮಾದ ಕಥೆಯಲ್ಲಿ ಬರುವ ಸನ್ನಿವೇಶವಲ್ಲ. ಬಾಗಲಕೋಟೆ ನವನಗರ ಸೆಕ್ಟರ್ ನಂ.15ರಲ್ಲಿರುವ ಆರ್ಎಫ್ಒ ಪಿ.ಎಸ್.ಖೇಡಗಿ ಅವರ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ.
ಹೌದು. ಖೇಡಗಿ ಅವರ ಮನೆ, ಬಾದಾಮಿ ಅರಣ್ಯ ಇಲಾಖೆ ಕಚೇರಿ, ಸೆಕ್ಟರ್ ನಂ.12ರಲ್ಲಿರುವ ಸಂಬಂಧಿಕರ ಮನೆ ಹಾಗೂ ಹಾಗೂ ಹರ್ಷಾ ಎಲೆಕ್ಟ್ರಿಕಲ್ ಶಾಪ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ಸತತ 9 ಗಂಟೆಗಳಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಮನೆಯಲ್ಲಿ ಕೈಹಾಕಿದ ಕಡೆಯೆಲ್ಲ ನಗ, ನಾಣ್ಯ, ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗುತ್ತಿದ್ದು ಎಸಿಬಿ ಅಧಿಕಾರಿಗಳೇ ದಂಗಾಗುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ
ಸದ್ಯಕ್ಕೆ ಖೇಡಗಿ ಅವರ ನಿವಾಸದಲ್ಲಿ 10 ಲಕ್ಷ ರೂ. ನಗದು, ಎರಡೂವರೆ ಕೆಜಿ ಚಿನ್ನಾಭರಣ, 12 ಕೆಜಿ ಬೆಳ್ಳಿ, 16 ಲಕ್ಷ ರೂ. ಬ್ಯಾಂಕ್ ಡೆಪಾಸಿಟ್ ಪತ್ತೆಯಾಗಿದ್ದು, ಚಿನ್ನ, ಬೆಳ್ಳಿ ತೂಕ ಮಾಡಲೆಂದು ಸ್ಥಳಕ್ಕೆ ಅಕ್ಕಸಾಲಿಗರನ್ನು ಕರೆಸಿದ್ದಾರೆ. ಅಲ್ಲದೆ ಖೇಡಗಿಯವರು 5 ಪ್ಲಾಟ್ ಖರೀದಿಸಿರುವ ದಾಖಲೆಗಳು, ಹಣ ಎಣಿಕೆ ಮಾಡುವ ಮಷೀನ್ ಹಾಗೂ ಶ್ರೀಗಂಧದ ಕಟ್ಟಿಗೆ ತುಂಡುಗಳು ಪತ್ತೆಯಾಗಿವೆ. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ
ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿಯಾಗಿರುವ ಪಿ.ಎಸ್.ಖೇಡಗಿ ಅವರು ಬಾಗಲಕೋಟೆಯ ನವನಗರದ 15ನೇ ಸೆಕ್ಟರ್ ನಲ್ಲಿ ನೆಲೆಸಿದ್ದಾರೆ. ಶೋಧ ಕಾರ್ಯ ಮುಂದುವರಿಸಿರುವ ಅಧಿಕಾರಿಗಳು ಮನೆಯಲ್ಲಿ ತನಿಖೆ ಮುಗಿದ ನಂತರ ಬ್ಯಾಂಕ್ ಲಾಕರ್ ಓಪನ್ ಮಾಡುವುದಾಗಿ ತಿಳಿಸಿದ್ದಾರೆ.