ಮೈಸೂರು: ಮಾಜಿ ಸಚಿವ ಎ. ಮಂಜು ಅವರು ಇಂದು ಮೈಸೂರಿನಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ರನ್ನ ಭೇಟಿ ಮಾಡಿದ್ದು, ಇಬ್ಬರ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಮೈಸೂರಿನ ಜಲದರ್ಶಿನಿ ಅಥಿತಿ ಗೃಹದಲ್ಲಿ ಭೇಟಿಯಾದ ಉಭಯ ನಾಯಕರು ಕೆಲ ಸಮಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮೈಮುಲ್ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾವಿನಹಳ್ಳಿ ಸಿದ್ದೇಗೌಡ ಅವರು ಕೂಡ ಭೇಟಿ ನೀಡಿ ವಿಶ್ವನಾಥ್ ಅವರಿಗೆ ವಂದನೆ ಸಲ್ಲಿಸಿದರು. ಮಾಜಿ ಸಚಿವ ಜಿಟಿಡಿ ಪರಮಾಪ್ತ ಮಾವಿನಹಳ್ಳಿ ಸಿದ್ದೇಗೌಡ ಅವರು ಇತ್ತೀಚೆಗಷ್ಟೇ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಈ ಸಂದರ್ಭದಲ್ಲಿ ಎ. ಮಂಜು ಅವರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಅವರು ಕೂಡ ನಮ್ಮ ಪಕ್ಷದ ಲೀಡರ್ ಅಲ್ವಾ ಎಂದು ನಕ್ಕರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ಫೋನ್ ಕದ್ದಾಲಿಕೆಯನ್ನು ಸಿಎಂ ಅವರ ಗಮನಕ್ಕೆ ತರದಂತೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸಿಎಂ ಅವರ ಅಡಿಯಲ್ಲೇ ಗುಪ್ತಚರ ಇಲಾಖೆ ಬರುತ್ತದೆ. ಗೃಹ ಸಚಿವರ ಕೈಯಲ್ಲಿ ಮಾತ್ರ ಪೊಲೀಸ್ ಇಲಾಖೆ ಇರುತ್ತದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.