ಬೆಂಗಳೂರು: ನಗರದಲ್ಲಿ ಇತ್ತೀಚಿಗೆ ಗ್ಯಾಂಗ್ ರೇಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ನೇಪಾಳ ಮೂಲದ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹೀಗೆ ಪಾಳುಬಿದ್ದಿರುವ ಬಂಗಲೆಗೆ ನೇಪಾಳ ಮೂಲದ ಯುವತಿಯನ್ನು ಅಪಹರಿಸಿಕೊಂಡು ಬಂದು ಅತ್ಯಾಚಾರ ನಡೆಸಿರುವ ಘಟನೆ ನಡೆದಿರೋದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅವಡದೇನಹಳ್ಳಿಯಲ್ಲಿ. ಕಳೆದ ಮೂರು ದಿನಗಳ ಹಿಂದೆ ಆರು ಯುವಕರ ಗುಂಪೊಂದು ನೇಪಾಳಿ ಯುವತಿಯನ್ನು ಇಲ್ಲಿಗೆ ಕರೆ ತಂದು ಅತ್ಯಾಚಾರವೆಸಗಿ ಕೊನೆಯಲ್ಲಿ ಯುವತಿ ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ.
ಶನಿವಾರ ಮುಂಜಾನೆ ಯುವತಿ ನೋವಿನಿಂದ ಕಿರುಚಿಕೊಂಡು ರಸ್ತೆಗೆ ಬಂದಾಗ ಯುವತಿಯನ್ನು ಕಂಡ ಎನ್ಜಿಓ ಒಂದರ ಕಾರ್ಯಕರ್ತರಾದ ಪಾರಿಜಾತ ಮತ್ತು ಶಂಕರ್ ಕೂಡಲೇ 108 ಅಂಬ್ಯುಲೆನ್ಸ್ ಮುಖಾಂತರ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಯುವತಿ ಈಗ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದಕ್ಕೂ ಮುನ್ನ ಯುವತಿ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದಳೆಂದು ತಿಳಿದು ಬಂದಿದೆ.
ವಿಷಯ ತಿಳಿದ ಬೆಂಗಳೂರು ಗ್ರಾಮಾಂತರ ಎಸ್.ಪಿ ಅಮಿತ್ ಸಿಂಗ್ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯಿಂದ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್.ಪಿ ಅಮಿತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾಮುಕರಿಗಾಗಿ ಬಲೆ ಬೀಸಿದ್ದಾರೆ.