ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಗುಂಡಿಯನ್ನು ತಪ್ಪಿಸುವ ಭರದಲ್ಲಿ ಫುಟ್ ಪಾತ್ಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಕೋರಮಂಗಲ ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ನಡೆದಿದೆ.
ತಡರಾತ್ರಿ ನಡೆದ ಈ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಜನರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 10 ಗಂಟೆಯ ಸಮಯದಲ್ಲಿ ಹೆಚ್ಎಸ್ಆರ್ ಲೇಔಟ್ ಕಡೆಯಿಂದ ಬಂದ ಟಾಟಾ ಸುಮೊ ಕಾರು ಕೋರಮಂಗಲದ ವಾಟರ್ ಟ್ಯಾಂಕ್ ಬಳಿ ರಸ್ತೆಯಲ್ಲಿದ್ದ ಗುಂಡಿಗಳನ್ನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಫುಟ್ಪಾತ್ಗೆ ಡಿಕ್ಕಿ ಹೊಡೆದಿದೆ.
ಕಾರನ್ನು ವೇಗವಾಗಿ ಚಲಿಸುತ್ತಿದ್ದರಿಂದ ಫುಟ್ಪಾತ್ ಬದಿಯ ಸಿಗ್ನಲ್ ಕಂಬಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡಿದೆ. ಇನ್ನೂ ಇದೇ ವೇಳೆ ಕಾರಿನಲ್ಲಿ ಇಬ್ಬರು ಯುವತಿಯರು ಸೇರಿ ಒಟ್ಟು ಆರು ಜನರು ಪ್ರಯಾಣಿಸುತ್ತಿದರು ಎಂದು ತಿಳಿದು ಬಂದಿದೆ. ಎಲ್ಲರೂ ಹಬ್ಬ ಪ್ರಯುಕ್ತ ರಜೆ ಇದ್ದರಿಂದ ಔಟಿಂಗ್ ತೆರಳಿದ್ದರು ಎಂದು ತಿಳಿದು ಬಂದಿದೆ.
ಅಪಘಾತದ ನಡೆದ ಕೂಡಲೇ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೋಲಿಸರು ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಕುಡಿದು ವಾಹನ ಚಲಾಹಿಸಿದ್ದೇ ಅಪಘಾತಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.