ಬೆಳಗಾವಿ: ಕಳೆದ 15 ದಿನಗಳಿಂದ ಬೆಳಗಾವಿ ನಗರದಲ್ಲಿ ಭೀತಿ ಹುಟ್ಟಿಸಿರುವ ಚಿರತೆ ಪತ್ತೆಗೆ ಶಸ್ತ್ರ ಸಜ್ಜಿತವಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ 200ಕ್ಕೂ ಸಿಬ್ಬಂದಿ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿವೆ. ಆದರೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಚಿರತೆ ಪತ್ತೆಯಾಗದೇ ಇರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.
ಆಗಸ್ಟ್ 5ರಂದು ಬೆಳಗಾವಿಯ ಜಾಧವ ನಗರದಲ್ಲಿ ಕಾಣಿಸಿಕೊಂಡ ಚಿರತೆ, ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಕಣ್ಮರೆಯಾಗಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಗಾಲ್ಫ್ ಮೈದಾನದಲ್ಲಿ 22 ಟ್ರ್ಯಾಪ್ ಕ್ಯಾಮೆರಾ, 8 ಬೋನುಗಳನ್ನು ಅಳವಡಿಸಿ ಚಿರತೆ ಸೆರೆಗೆ ಮುಂದಾಗಿತ್ತು. ಈ ವೇಳೆ ಆಗಸ್ಟ್ 7 ಮತ್ತು 8 ರಂದು ಎರಡು ಭಾರಿ ಗಾಲ್ಫ್ ಮೈದಾನದಲ್ಲಿ ಚಿರತೆ ಚಲನವಲನ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ದಿನದಿಂದ ದಿನಕ್ಕೆ ಜನರಲ್ಲಿ ಚಿರತೆ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಇವತ್ತು 200 ಸಿಬ್ಬಂದಿ ಮುಂದಿಟ್ಟುಕೊಂಡು ಚಿರತೆ ಸೆರೆಗೆ ಮುಂದಾಗಿವೆ. ಇದನ್ನೂ ಓದಿ: ಸಾವರ್ಕರ್, ಗೃಹ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್
ಪೊಲೀಸ್ ಇಲಾಖೆ ಧ್ವನಿವರ್ಧಕಗಳ ಮೂಲಕ, ಗಾಲ್ಫ್ ಪ್ರದೇಶ, ಹನುಮಾನಗರ, ಕುವೆಂಪು ನಗರ, ದೂರದರ್ಶನ ನಗರ, ಜಾಧವ ನಗರ ಹಾಗೂ ಕ್ಯಾಂಪ್ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಿದೆ. ಅರಣ್ಯ ಇಲಾಖೆಯಿಂದ ಮತ್ತೇರುವ ಗುಂಡು ಹಾರಿಸಿ ಚಿರತೆಯನ್ನು ಅಸ್ವಸ್ಥಗೊಳಿಸಿ, ಅದು ಮೂರ್ಛೆ ಹೋದಾಗ ಅದನ್ನು ಬಲೆಗೆ ಹಾಕಲು ವಿಶೇಷ ಶೂಟರ್ಗಳು ಸಹ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ರಕ್ಷಣಾ ಸಾಮಗ್ರಿ ಸಮೇತ 100 ಮಂದಿ ಅರಣ್ಯ, 100 ಪೊಲೀಸ್ ಸಿಬ್ಬಂದಿ ಇದ್ದರು.
ಎಸಿಎಫ್ ಮಂಜುನಾಥ ಕುಸನಾಳ, ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ ಇಬ್ಬರು ಅರವಳಿಕೆ ತಜ್ಞರು, ಅರವಳಿಕೆ ಮದ್ದು ಸಮೇತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕೈಯಲ್ಲಿ ಕೊಯಿತಾ, ಬಡಿಗೆ, ಹೆಲ್ಮೆಟ್, ರಕ್ಷಣಾ ವಸ್ತುಗಳ ಸಮೇತ ಕಾರ್ಯಾಚರಣೆ ನಡೆಸಲಾಯಿತು. ಆದರೆ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಹೀಗಾಗಿ ಚಿರತೆ ಸಿಗುವವರೆಗೂ ಚಿರತೆ ಪತ್ತೆ ಕಾರ್ಯ ಮುಂದುವರಿಯಲಿದೆ. ಸಾರ್ವಜನಿಕರು ಭೀತಿಗೆ ಒಳಗಾಗಬಾರದು. ಗಾಲ್ಫ್ ಮೈದಾನದ ಕಡೆಗೆ ವಾಯುವಿಹಾರ ಮಾಡದಂತೆ ಬೆಳಗಾವಿ ಎಸಿಎಫ್ ಮಂಜುನಾಥ ಕುಸನಾಳ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್