ಶ್ರೀನಗರ: ನಿರಾಶ್ರಿತ ಕಾಶ್ಮೀರಿ ಪಂಡಿತರ ಸಂಕಷ್ಟದ ಕುರಿತಾದ ʼದಿ ಕಾಶ್ಮೀರಿ ಫೈಲ್ಸ್ʼ ಎಂಬ ಚಲನಚಿತ್ರವನ್ನು ಮುಂದಿಟ್ಟುಕೊಂಡು ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸಲು ಬಿಜೆಪಿ ಮುಂದಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ನಾನು ‘ದಿ ಕಾಶ್ಮೀರ ಫೈಲ್ಸ್’ ನೋಡಿಲ್ಲ. ಚಿತ್ರದಲ್ಲಿ ಹಿಂಸಾಚಾರ, ರಕ್ತಪಾತಗಳು ಹೆಚ್ಚಾಗಿದ್ದು, ನೋವಿನ ದೃಶ್ಯಗಳಿವೆ ಎಂದು ಕೇಳಿದ್ದೇನೆ. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಭಯಾನಕ. ಅವರ ನೋವನ್ನು ನಾವು ಅನುಭವಿಸುತ್ತೇವೆ. ಆದರೆ ನೀವು ಕಾಶ್ಮೀರಿ ಮುಸ್ಲಿಮರನ್ನು ದ್ವೇಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಎಂಸಿ ನಾಯಕನನ್ನು ಅರೆಸ್ಟ್ ಮಾಡುವಂತೆ ಮಮತಾ ಬ್ಯಾನರ್ಜಿ ಆದೇಶ
ʼದಿ ಕಾಶ್ಮೀರ್ ಫೈಲ್ಸ್ʼ ವೀಕ್ಷಿಸಿ, ಆದರೆ ಮುಸ್ಲಿಮರನ್ನು ದ್ವೇಷಿಸಬೇಡಿ. ಕಣಿವೆಯಿಂದ ಕಾಶ್ಮೀರಿ ಪಂಡಿತರು ವಲಸೆ ಹೋದ ಬಗ್ಗೆ ಕೇಂದ್ರ ಸರ್ಕಾರ ತನಿಖೆಗೆ ಕ್ರಮವಹಿಸಬೇಕು. ಅಷ್ಟೇ ಅಲ್ಲ 2020ರ ದೆಹಲಿ ಗಲಭೆ ಮತ್ತು 2002ರಲ್ಲಿ ಗುಜರಾತ್ನಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿ ಸಮುದಾಯವೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಕೆಟ್ಟ ದಬ್ಬಾಳಿಕೆಯನ್ನು ಎದುರಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಜನರು ಪಾಕಿಸ್ತಾನ ಮತ್ತು ಭಾರತದ ಬಂದೂಕುಗಳ ನಡುವೆ ಸಿಕ್ಕಿಬಿದ್ದಿದ್ದಾರೆ. ಕಾಶ್ಮೀರಿ ಪಂಡಿತರೂ ಇದಕ್ಕೆ ಬಲಿಯಾಗಿದ್ದರು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಹಾರ ದಿವಸ್ ಆಚರಣೆಯಲ್ಲಿ ಆಹಾರ ಸೇವಿಸಿದ 100 ಮಕ್ಕಳು ಆಸ್ಪತ್ರೆಗೆ ದಾಖಲು
ಪ್ರಧಾನಿ ಮತ್ತು ಬಿಜೆಪಿ ನಾಯಕರು, ಸಿನಿಮಾವನ್ನು ತೆರಿಗೆ ಮುಕ್ತ ಮಾಡಿ, ಉಚಿತ ಟಿಕೆಟ್ ನೀಡುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಧಾರ್ಮಿಕ ಆಧಾರದ ಮೇಲೆ ಜನರನ್ನು ಪ್ರಚೋಧಿಸಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.