ಹಾವೇರಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸ್ ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ ಎಮದು ಮೃತ ನವೀನ್ ಸಹೋದರ ಹರ್ಷ ಭಾವುಕರಾದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ಮನೆಯಲ್ಲಿ ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೆ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?
ರಷ್ಯಾ-ಉಕ್ರೇನ್ ನಡುವಿನ ಯುದ್ಧದ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ (22) ಬಲಿಯಾಗಿದ್ದಾರೆ. ಖಾರ್ಕೀವ್ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ದುರಂತ ಸಾವನ್ನಪ್ಪಿದ್ದಾರೆ. ಖಾರ್ಕೀವ್ನಲ್ಲಿ ಇವತ್ತು ಬೆಳಗ್ಗೆ 7 ಗಂಟೆಗೆ ಸೂಪರ್ ಮಾರ್ಕೆಟ್ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ನವೀನ್ ದುರ್ಮರಣಕ್ಕೀಡಾಗಿದ್ದಾರೆ. ಇದನ್ನೂ ಓದಿ: ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್ ಕಾರ್ಡ್ ಬ್ಲಾಕ್ – ATMಗಳ ಮುಂದೆ ರಷ್ಯನ್ನರ ದಂಡು
ಈ ಬಗ್ಗೆ, ಖಾರ್ಕೀವ್ನಲ್ಲಿರುವ ನವೀನ್ ಸ್ನೇಹಿತ ಶ್ರೀಕಾಂತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಳಗ್ಗೆ 7.30ಕ್ಕೆ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಿತ್ತು. ರೈಲಿನ ಮೂಲಕ ಪೋಲೆಂಡ್ ಗಡಿ ತಲುಪಬೇಕಿತ್ತು. ನವೀನ್ ಸೇರಿ 8 ಜನರ ನಮ್ಮ ತಂಡ ರೈಲ್ವೇ ನಿಲ್ದಾಣಕ್ಕೆ ಹೊರಡಬೇಕಿತ್ತು. ಈ ವೇಳೆ ಎಲ್ಲರಿಗೂ ಊಟ ತರಲು ಬಂಕರ್ನಿಂದ ನವೀನ್ ಹೊರ ಹೋಗಿದ್ದ. ಸೂಪರ್ ಮಾರ್ಕೆಟ್ ಬಳಿ ತುಂಬಾ ಕ್ಯೂ ಇದೆ. ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ. ಅದೇ ಅವನ ಕೊನೆ ಮಾತಾಗಿತ್ತು. ನಮಗೆಂದು ಊಟ ತರಲು ಹೋದವರ ಬರಲೇ ಇಲ್ಲ ಅಂತ ಭಾವುಕರಾದರು.