ಕೊಪ್ಪಳ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ದಂಪತಿ ತಮ್ಮ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ವಿವರ: ಮಂಜುನಾಥ-ಭದ್ರಮ್ಮ ದಂಪತಿ ಕೊಪ್ಪಳದ ಜಿಲ್ಲಾಸ್ಪತ್ರೆ ಮುಂದೆ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದರು. ಮಗು ಸಾಕಲು ಸಾಧ್ಯವಾಗದ ಕಾರಣ ಮಗುವನ್ನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಇವರು ಪ್ರತಿದಿನ ಭಿಕ್ಷೆ ಬೇಡುವಾಗಲೂ ಮಗು ಇವರ ಜೊತೆಯೇ ಇರುತ್ತಿತ್ತು. ಆದರೆ ಭದ್ರಮ್ಮ ಬಳಿ ಇಂದು ಮಗು ಇಲ್ಲದ್ದರಿಂದ ಸ್ಥಳೀಯರು ಅನುಮಾನಗೊಂಡು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಮಕ್ಕಳ ಸಹಾಯವಾಣಿ ಸಿಬ್ಬಂದಿ ಭಿಕ್ಷುಕ ದಂಪತಿಯನ್ನು ವಿಚಾರಣೆ ಮಾಡಿದಾಗ ಹೊಸಪೇಟೆಯ ನರ್ಸ್ ಒಬ್ಬರ ಬಳಿ ಮಗು ಇದೆ ಎಂದು ದಂಪತಿ ತಿಳಿಸಿದ್ದಾರೆ. ಇದೇ ವೇಳೆ ದಂಪತಿ ಬಳಿ ಮೂವತ್ತು ಸಾವಿರ ರೂಪಾಯಿ ಹಣ ಪತ್ತೆಯಾಗಿದೆ. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ
ಹಣ ಪತ್ತೆಯಾಗಿದ್ದರಿಂದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಭಿಕ್ಷುಕ ದಂಪತಿಯನ್ನು ವಶಕ್ಕೆ ಪಡೆದಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.