ಕನ್ನೇರಿ.. ನಿರ್ದೇಶಕ ನೀನಾಸಂ ಮಂಜು ಕನಸಿನ ಸಿನಿಮಾ. ಮೂಕಹಕ್ಕಿ ಮೂಲಕ ಮನ ಮುಟ್ಟುವ ಕಥೆ ಹೇಳಿ ಪ್ರೇಕ್ಷಕರ ಮನದಲ್ಲಿ ಭರವಸೆ ಹುಟ್ಟಿಸಿರುವ ನಿರ್ದೇಶಕ. ಈಗ ಕನ್ನೇರಿ ಎಂಬ ನೈಜ ಘಟನೆ ಆಧಾರಿತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹೊತ್ತು ತರಲು ಸಜ್ಜಾಗಿದ್ದಾರೆ. ಫಸ್ಟ್ ಲುಕ್ ಮೂಲಕ ಕನ್ನೇರಿ ಪ್ರಚಾರ ಕಾರ್ಯಕ್ಕೆ ಈಗಾಗಲೇ ಮುನ್ನುಡಿ ಬರೆದಿರುವ ನಿರ್ದೇಶಕರು ಈಗ ಚಿತ್ರದ ಚೆಂದದ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
ಕೋಟಿಗಾನಹಳ್ಳಿ ರಾಮಯ್ಯ ಅವರ ಲೇಖನಿಯಲ್ಲಿ ಅರಳಿರುವ ಬೆಟ್ಟ ಕಣಿವೆಗಳ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಚಿತ್ರದ ಕಥೆಗೆ ಪೂರಕವಾದ ಈ ಹಾಡನ್ನು ಖ್ಯಾತ ನಟಿ ಶ್ರುತಿ ಮೆಚ್ಚಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಕಾಡಿನ ಜನರ ಚೆಂದದ ಬದುಕು ಆ ಬದುಕಲಿದ್ದ ಖುಷಿ, ಯಾರದ್ದೋ ಸಂಚಿನಿಂದ ಅಸ್ತಿತ್ವ ಕಳೆದುಕೊಂಡ ನೋವು ಎಲ್ಲವೂ ಬೆರೆತ ಈ ಹಾಡು ಮನಮುಟ್ಟುವಂತೆ ಮೂಡಿ ಬಂದಿದ್ದು, ಆ ಸಾಲುಗಳಿಗೆ ಅಷ್ಟೇ ಚೆಂದದ ದನಿಯಾಗಿದ್ದಾರೆ ಗಾಯಕ ಸಚಿನ್ ಅರಬಳ್ಳಿ. ಮಣಿಕಾಂತ್ ಕದ್ರಿ ಸಂಗೀತವೂ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ. ಇದನ್ನೂ ಓದಿ: ಆರೋಗ್ಯಕರವಾದ ಮಸಾಲಾ ಟೀ ಒಮ್ಮೆ ಮಾಡಿ ನೋಡಿ
ಕನ್ನೇರಿ ಚಿತ್ರಕ್ಕೆ ನೈಜ ಘಟನೆಯೇ ಜೀವಾಳ. ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಹೋರಾಟದ ಕಥೆಯೇ ಚಿತ್ರಕ್ಕೆ ಸ್ಪೂರ್ತಿ. ದಿಡ್ಡಳ್ಳಿ ಹೋರಾಟದ ಜಾಡು ಹಿಡಿದು ಹೊರಟ ನಿರ್ದೇಶಕ ನೀನಾಸಂ ಮಂಜು ಅವರಿಗೆ ಅವರ ಬವಣೆ, ಅಭದ್ರತೆ, ಬದುಕು ಕಟ್ಟಿಕೊಳ್ಳುವ ಹಂಬಲ, ಅಲ್ಲಿನ ಹೆಣ್ಣು ಮಕ್ಕಳ ತೊಳಲಾಟ ಎಲ್ಲವೂ ಕಾಡಿದೆ. ಆ ಕಾಡುವ ಕಥನವನ್ನೇ ಸಿನಿಮಾವಾಗಿಸಿ ಹೊಸದೇನನ್ನೋ ಚಿತ್ರ ಪ್ರೇಮಿಗಳಿಗೆ ಉಣಬಡಿಸಲು ಸಕಲ ಸಜ್ಜಾಗಿ ನಿಂತಿದ್ದಾರೆ. ಇಂತಹದೊಂದು ಕಥೆಗೆ ಇನ್ನಷ್ಟು ಸ್ಪೂರ್ತಿ ತುಂಬಿದ್ದು ಕ್ಷೀರಸಾಗರ ಅವರ `ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆ. ಈ ಎಲ್ಲದಕ್ಕೂ ಕಥೆಯ ರೂಪ ಕೊಟ್ಟವರು ಕೋಟಿಗಾನಹಳ್ಳಿ ರಾಮಯ್ಯ. ಇದನ್ನೂ ಓದಿ: ಒಂದೇ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ – ಇದರ ಹಿಂದಿನ ರಹಸ್ಯವೇನು?
ಕನ್ನೇರಿ ಚಿತ್ರಕ್ಕೆ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಜೀವ ತುಂಬಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಪಿ.ಪಿ ಹೆಬ್ಬಾರ್ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿರೋ ಸಿನಿಮಾಗೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್ ನಾಯಕ್ ಸಂಕಲನವಿದೆ. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು