ಮಡಿಕೇರಿ: 4.96 ಕೋಟಿ ವೆಚ್ಚದ 5.99 ಕಿ.ಮೀ ರಸ್ತೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಸೋಮವಾರಪೇಟೆ ತಾಲೂಕಿನ ಐದು ಗ್ರಾಮಗಳ ಗ್ರಾಮಸ್ಥರು ಆರೋಪಿಸಿದ್ದಾರೆ. ಕೊಡ್ಲೂರ್ ಗ್ರಾಮದಿಂದ ಹಂಡ್ಲಿ ಗ್ರಾಮದವರೆಗೆ 5 ಗ್ರಾಮಗಳನ್ನು ಒಳಗೊಂಡಂತೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣವಾಗುತ್ತಿದೆ. ರೂ. 4.96 ಕೋಟಿ ವೆಚ್ಚದ 5.99 ಕಿ.ಮೀ ರಸ್ತೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಗ್ರಾಮ ಪ್ರಮುಖರಾದ ತಾಳೂರು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2020ರ ಸೆಪೆಂಬರ್ 9 ರಂದು ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅನುದಾನದಲ್ಲಿ ಗುತ್ತಿದೆದಾರ ಶಿವಲೀಲಾ ಸುರೇಶ್ ಸಜ್ಜನ್, ಎಂಜಿನಿಯರ್ ಗಳಾದ ಪ್ರಭು ಹಾಗೂ ಪೂವಯ್ಯ ಅವರಿಂದ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಅಪ್ಪಚ್ಚುರಂಜನ್ ಶಂಕುಸ್ಫಾಪನೆ ನೆರವೇರಿಸಿದ್ದರು. ಅಕ್ಟೋಬರ್ ನಿಂದ ಕಾಮಗಾರಿಗೆ ಚಾಲನೆ ನೀಡಲಾಯಿತು.
ರಸ್ತೆಯ ಎರಡೂ ಕಡೆಯಿಂದ ರಸ್ತೆಗೆ ಅಗತ್ಯವಿರುವ 32 ಅಡಿ ಅಗಲೀಕರಣ ಮಾಡುತ್ತಾ ಕೆಲ ಮನೆಗಳ ಮುಂದೆ ಬೇಕಾದ ಹಾಗೇ ಜಾಗ ಬಿಟ್ಟು ಕಾಮಗಾರಿ ಮುಂದುವರಿಸಿದರು. ನಂತರ ರಸ್ತೆಗೆ 40 ಹಾಗೂ 20 ಎಂಎಂ ಕಲ್ಲುಗಳ ಮಿಶ್ರಣವನ್ನು ಹಾಕಿ ಸಮತಟ್ಟಾದ ಮೇಲ್ಪದರವನ್ನು ರೋಲಿಂಗ್ ಮಾಡಿ ಡಾಂಬರ್ ಹಾಕಿದ್ದಾರೆ. 15 ದಿನಗಳ ನಂತರ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಂಚರಿಸಿದಾಗ ರಸ್ತೆಗೆ ಹಾನಿಯಾಗಿದೆ. ಪ್ರತಿದಿನ ಓಡಾಡುವ ವಾಹನಗಳಿಂದ ರಸ್ತೆಯ ಎರಡೂ ಕಡೆಯಲ್ಲೂ ಹಾಳಾಗುತ್ತಿದೆ. 2021ರ ಆಗಸ್ಟ್ 13ಕ್ಕೆ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿಯಬೇಕಾಗಿರುವುದರಿಂದ ರಸ್ತೆಯ ಎರಡೂ ಕಡೆ ಡ್ರೈನೇಜ್ ಮಾಡದೇ ಶೋಲ್ಡರ್ ಮೇಲೆ ರೋಲಿಂಗ್ ಹಾಗೂ ಅಧಿಕ ವೈಬ್ರೈಟರ್ ರೋಲ್ ಮಾಡದೆ ಡಾಂಬರು ಮಾಡಿರುವುದರಿಂದಲೇ ರಸ್ತೆಯ ಗುಣಮಟ್ಟ ಕಳಪೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.