– ಚಾಮರಾಜನಗರ ದುರಂತಕ್ಕೆ ವಿಷಾದ
– ಮಾಧ್ಯಮದವರು ಫ್ರಂಟ್ಲೈನ್ ವಾರಿಯರ್ಸ್ ಅಂತ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಇಲ್ಲ. ಹಾಲಿ ಇರುವ ಜನತಾ ಲಾಕ್ ಡೌನ್ ಮಾತ್ರ ಇರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಕೂರಬೇಕು. ಸ್ಥಳದಲ್ಲೇ ತೀರ್ಮಾನ ತೆಗೆದುಕೊಳ್ಳಬೇಕು, ಸಂಪೂರ್ಣ ಸ್ವತಂತ್ರ ಉಸ್ತುವಾರಿ ಸಚಿವರಿಗೆ ಕೊಟ್ಟಿದ್ದೇವೆ. ರಾಜ್ಯಕ್ಕೆ ಅಗತ್ಯ ಇರುವ ಆಕ್ಸಿಜನ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಜನತಾ ಕರ್ಫ್ಯೂ ಮೇ 12 ರವರೆಗೆ ಇದೆ. ಮುಂದೇನು ಮಾಡಬೇಕೆಂದು ಚರ್ಚೆ ಮಾಡಿ ನಿರ್ಧರಿಸ್ತೇವೆ ಎಂದು ತಿಳಿಸಿದರು.
ರೆಮಿಡಿಸಿವರ್ ಔಷಧಿ ನಿರ್ವಹಣೆಗೆ, ಮಾನವಸಂಪನ್ಮೂಲ ನಿರ್ವಹಣೆಗೆ ಅಶ್ವಥನಾರಾಯಣ್ ಅವರಿಗೆ ಜವಾಬ್ದಾರಿ ಹೊರಿಸಲಾಗಿದೆ. ಬೆಡ್ ವ್ಯವಸ್ಥೆ, ಬೆಡ್ ಸಮಸ್ಯೆ ನಿರ್ವಹಣೆ ಜವಾಬ್ದಾರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಗೆ ವಹಿಸಿದ್ದೇವೆ. ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣಾ ಜವಾಬ್ದಾರಿ ಅರವಿಂದ್ ಲಿಂಬಾವಳಿಗೆ ವಹಿಸಿರುವುದಾಗಿ ಸಿಎಂ ಮಾಹಿತಿ ನೀಡಿದರು.
850 ಟನ್ ಹಂಚಿಕೆಗೆ ಏರಿಕೆ ಮಾಡಿದ್ದಾರೆ. ಜಿಂದಾಲ್ ನಿಂದ ಮಹಾರಾಷ್ಟ್ರಕ್ಕೆ ಹೋಗ್ತಿರುವ ಹಂಚಿಕೆಯನ್ನ ರಾಜ್ಯಕ್ಕೆ ನೀಡಲು ಮನವಿ ಮಾಡಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಹೊರರಾಜ್ಯಗಳಿಂದ ಬರುತ್ತಿರುವ ಆಕ್ಸಿಜನ್ ಸರಬರಾಜು ವಿಳಂಬ ಆಗ್ತಿದೆ, ಈ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಚಾಮರಾಜನಗರ ದುರಂತ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಎಂ, ಇಂತಹ ಘಟನೆ ನಡೆಯಬಾರದಿತ್ತು. ಪ್ರಕರಣಕ್ಕೆ ಕಾತಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮುಂದೆ ಇಂತಹ ಘಟನೆ ಮರುಕಳಿಸಬಾರದು. ಆ ರೀತಿಯಲ್ಲಿ ಕ್ರಮ ತಗೋತೀವಿ ಎಂದು ಭರವಸೆ ನೀಡಿದರು.
ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಾಕ್ಟರ್ ಗಳು, ನರ್ಸ್ ಗಳನ್ನು ನೇಮಕ ಮಾಡಲು ಸೂಚಿಲಾಗಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಈನಿಟ್ಡಿನಲ್ಲಿ ಸೂಚನೆ ರೆಮೆಡಿಸಿವಿರ್ ಕಾಳಸಂತೆ ಮಾರಾಟ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆಯಲ್ಲಿ ಮಾರಾಟ ಮಾಡೋರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮಾಧ್ಯಮದವರು ಫ್ರಂಟ್ಲೈನ್ ಕೊರೊನಾ ವಾರಿಯರ್ಸ್ ಎಂದು ಇದೇ ವೇಳೆ ಮುಖ್ಯಮಂತ್ರಿ ಘೋಷಣೆ ಮಾಡಿದರು. ಮಾಧ್ಯಮದವರಿಗೆ ಲಸಿಕೆ ಕೊಡಿಸಲು ಕ್ರಮವಹಿಸಲು ಸೂಚಿಸಲಾಗಿದೆ. ಒಟ್ಟಿನಲ್ಲಿ ಬಿಹಾರದಂತೆ ರಾಜ್ಯದಲ್ಲೂ ಮಾಧ್ಯಮದವರು ಫ್ರಂಟ್ ಲೈನ್ ವಾರಿಯರ್ಸ್ ಎಂದು ಸರ್ಕಾರ ಘೋಷಿಸಿದೆ.
ಬೆಂಗಳೂರು ಸಂಸದರು ವಾರ್ ರೂಂ ನಲ್ಲಿ ಬೆಡ್ ಹಂಚಿಕೆ ಪ್ರಕರಣ ಬಯಲಿಗೆ ತಂದಿದಾರೆ. ತೇಜಸ್ವಿ ಸೂರ್ಯ ಜೊತೆ ಕೂತು ಚರ್ಚೆ ಮಾಡ್ತೇನೆ. ಬೆಡ್ ಲಾಕ್ ದಂಧೆ ನಡೆಸ್ತಿದ್ದವರ ವಿರುದ್ಧ ಕ್ರಮ ತಗೋತೇವೆ. ಅಂಥವರ ವಿರುದ್ಧ ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ದೊಡ್ಡವರಿದ್ದರೂ ಕ್ರಮ ತಗೋತೇವೆ ತೇಜಸ್ವಿ ಸೂರ್ಯ ಬಳಿ ವಾಸ್ತವಿಕ ಮಾಹಿತಿ ಪಡೆಯುತ್ತೇನೆ ಎಂದರು.
ಮಾಹಿತಿ ತಿಳ್ಕೊಂಡು ಕ್ರಮ ತಗೋತೇವೆ. ಚಾಮರಾಜನಗರ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ ಬಗ್ಗೆ ಚರ್ಚೆ ಮಾಡ್ತೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಾವೇ ಬಳಸುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇದರ ಬಗ್ಗೆ ಅಮಿತ್ ಶಾ ಜೊತೆ, ಹರ್ಷವರ್ಧನ್ ಜತೆ ಚರ್ಚೆ ಮಾಡಿದ್ದೇನೆ. ನಮ್ಮಲ್ಲಿ ಉತ್ಪಾದಿಸುವ ಆಕ್ಸಿಜನ್ ನಮಗೆ ಬಳಸಲು ಅವಕಾಶ ಕೊಡಲು ಮನವಿ ಮಾಡಿದ್ದೇನೆ. ಕೇಂದ್ರ ಸಚಿವರೂ ಇದಕ್ಕೆ ಒಪ್ಕೊಂಡಿದ್ದಾರೆ ಕೇಂದ್ರ ಸರ್ಕಾರ ಇದರ ಬಗ್ಗೆ ಇವತ್ತು ಅಥವಾ ನಾಳೆ ಸ್ಪಷ್ಟಪಡಿಸಲಿದೆ ಎಂದರು.
ಇದೇ ವೇಳೆ ಡಿಸಿಎಂ ಅಶ್ವಥನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಸಿಎಂಗೆ ಸಾಥ್ ನೀಡಿದರು.