ಹುಬ್ಬಳ್ಳಿ: ಕೊರೊನಾದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬ್ರೇಕ್ ಬಿದ್ದಿತ್ತು. ಕೆಲ ವಾರದ ಹಿಂದೆ ಸ್ಕೂಲ್, ಕಾಲೇಜ್ ಓಪನ್ ಆಗಿದೆ. ಆದರೆ ಅಷ್ಟು ಬೇಗ ಅವ್ಯವಸ್ಥೆ ತಾಂಡವ ಆಡೋಕೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ.
ಇದು ಹುಬ್ಬಳ್ಳಿಯ ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಶ್ರೀ ಸಂಗಮೇಶ್ವರ ಸರ್ಕಾರಿ ಪ್ರೌಢಶಾಲೆ. ಇಲ್ಲಿನ ಮಕ್ಕಳು ಇದೀಗ ಬೀದಿಗೆ ಬಂದಿದ್ದಾರೆ. ಈ ಸರ್ಕಾರಿ ಅನುದಾನಿತ ಈ ಪ್ರೌಢಶಾಲೆಯಲ್ಲಿ ಬರೋಬ್ಬರಿ 173ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅದರಲ್ಲೂ ಎಸ್ಎಸ್ಎಲ್ಸಿ ತರಗತಿಯೊಂದ್ರಲ್ಲೆ 71 ಮಕ್ಕಳಿದ್ದಾರೆ. ಈ ಶಾಲೆಗೆ ಸ್ವಂತ ಕಟ್ಟಡ, ಶೌಚಾಲಯ ಇದ್ರು ಶಾಲೆಯ ವೇತನಾನುದಾನವನ್ನ ಕಟ್ ಮಾಡಲಾಗಿದೆ. ಮಾತ್ರವಲ್ಲ ಶಿಕ್ಷಕರನ್ನ ಬೇರಡೆ ವರ್ಗಾವಣೆ ಮಾಡಲಾಗಿದೆ.
ಇತ್ತೀಚಿಗಷ್ಟೇ ಆರಂಭವಾಗಿರುವ ಶಾಲೆಯಲ್ಲಿ ಶಿಕ್ಷಕರನ್ನ ಏಕಾಏಕಿ ವರ್ಗ ಮಾಡಿದ್ದಕ್ಕೆ ನೂರಾರು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಶಾಲೆಯ ವೇತನ ಅನುದಾನವನ್ನ ಮುಂದುವರಿಸಿ, ವರ್ಗಾವಣೆ ಮಾಡಿರುವ ಶಿಕ್ಷಕರನ್ನ ಮರಳಿ ಶಾಲೆಗೆ ನೇಮಿಸಿ ಶಾಲೆ ಆರಂಭಿಸಿ ಅಂತ ಮಕ್ಕಳು ಆಗ್ರಹಿಸಿದ್ದಾರೆ. ರಸ್ತೆ ತಡೆದು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಪೋಷಕರು ಸಹ ಬೆಂಬಲ ನೀಡಿದ್ದಾರೆ. ಆದರೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಾಸಕರನ್ನ ಪ್ರಶ್ನೆ ಮಾಡಿದಕ್ಕೆ ಗ್ರಾಮಸ್ಥರ ಮೇಲೆ ಇದೀಗ ದೊಂಬಿ, ಗಲಭೆ ಯತ್ನ, ವಾಹನ ಸಂಚಾರಕ್ಕೆ ಅಡ್ಡಿ ಅಂತಾ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಜೋಡಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಈ ಶಾಲೆ ಬಿಟ್ಟು ಬೇರೆ ಶಾಲೆಗೆ ಹೋಗಲು ಬರೋಬ್ಬರಿ 18 ಕಿಲೋ ಮೀಟರ್ ಕ್ರಮಿಸಬೇಕು. ಈಗ ಶಾಸಕರು ಅಧಿಕಾರಿಗಳು ಶಾಲೆಯ ವೇತನಾನುದಾನವನ್ನ ಕಟ್ ಮಾಡಿರುವುದರಿಂದ ನೂರಾರು ಮಕ್ಕಳ ಭವಿಷ್ಯ ಮಂಕಾಗಿದೆ. ಹೀಗಾಗಿ ಶಿಕ್ಷಣ ಸಚಿವರೇ ಈ ಶಾಲೆಯ ಮಕ್ಕಳಿಗಾಗಿ ಸೂಕ್ತ ಪರಿಹಾರ ಕಲ್ಪಿಸಬೇಕಿದೆ.